ಒಡಿಶಾ: 15 ವರ್ಷದ ಬಾಲಕನೋರ್ವನನ್ನ ಶಾಲೆಯ ಶಿಕ್ಷಕರು ಹಿಗ್ಗಾಮುಗ್ಗಾ ಥಳಿಸಿ ಬಾಲಕ ಸಾವನ್ನಪ್ಪಿರುವ ಘಟನೆ ಒಡಿಶಾದ ಬಾಲಸೋರ್ನ ಬನ್ಸಿಧರ್ನಲ್ಲಿ ನಡೆದಿದೆ. ಅಕ್ಟೋಬರ್ 7 ರಂದು ಘಟನೆ ನಡೆದಿದ್ದು, ಬಾಲಸೋರ್ನ ಬನ್ಸಿಧರ್ ವಿದ್ಯಾಪೀಠದಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಸುಮಂತ ದಾಸ್ ಎಂಬಾತ ಶಿಕ್ಷಕರಿಂದ ಥಳಿಸ್ಪಲ್ಲಿಟ್ಟಿದ್ದು, ಆತ ಮತ್ತೊಬ್ಬ ವಿದ್ಯಾರ್ಥಿಯ ಸೈಕಲ್ ಓಡಿಸಿ ಸಿಕ್ಕಿಬಿದ್ದಿದ್ದಾನೆ. ಸುಮಂತ ದಾಸ್ ನನ್ನ ಸೈಕಲ್ ಕದ್ದು ಓಡಿಸಿರೋದಾಗಿ ಮತ್ತೊಬ್ಬ ವಿದ್ಯಾರ್ಥಿ ಶಿಕ್ಷಕರ ಬಳಿ ದೂರು ನೀಡಿದ್ದ. ವಿದ್ಯಾರ್ಥಿ ದೂರಿದ್ದರಿಂದ ಶಿಕ್ಷಕರು ಸುಮಂತ್ ದಾಸ್ನನ್ನ ಕರೆಸಿ ವಿಚಾರಣೆ ನಡೆಸಿದ್ದು, ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಥಳಿತಕ್ಕೊಳಗಾಗದ ಬಾಲಕ ಮನೆಗೆ ತೆರಳಿದ ಬಳಿಕ ಸಾವನ್ನಪ್ಪಿದ್ದಾನೆ.
ಇನ್ನು ಈ ಬಗ್ಗೆ ಬಾಲಕನ ತಂದೆ ಪೊಲೀಸ್ ಠಾಣೆಗೆ ದೂರಿ ನೀಡಿದ್ದು, ಅನುಮತಿಯಿಲ್ಲದೆ ತನ್ನ ಬೈಸಿಕಲ್ ತೆಗೆದುಕೊಂಡು ಹೋಗಿದ್ದಾನೆ ಎಂದು ಸಹಪಾಠಿ ದೂರಿದಕ್ಕೆ ನನ್ನ ಮಗನನ್ನ ಥಳಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶಿಕ್ಷಕರು ಹೊಡೆದ ಬಳಿಕ ಮನೆಗೆ ಹಿಂದಿರುಗಿದ ನಂತರ, ಬಾಲಕನಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಎದೆನೋವು ಕಾಣಿಸಿಕೊಂಡ ತಕ್ಷಣವೇ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.
ಆರೋಪಿ ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಾಸ್ ಪೋಷಕರು ಶಾಲೆಯ ಹೊರಗೆ ಪ್ರತಿಭಟನೆಯನ್ನೂ ನಡೆಡಸಿದ್ದಾರೆ. ಪ್ರಕರಣದ ಕುರಿತು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಪ್ರಕರಣದ ಕುರಿತಂತೆ FIR ದಾಖಲಿಸಲಾಗಿದೆ. ಈಗಾಗಲೇ ಶಿಕ್ಷಕರ ಬಳಿಯೂ ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.