ಅಹಮದಾಬಾದ್ : ತಮ್ಮ ಅಕ್ರಮ ಸಂಬಂಧದ ಬಗ್ಗೆ ತಿಳಿಯಿತೆಂದು ಎಂಟು ವರ್ಷದ ಬಾಲಕನನ್ನು ಸಾಯಿಸಿದ್ದ ತಾಯಿ ಮತ್ತು ಚಿಕ್ಕಪ್ಪನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ಹುಡುಗ ಕಾಣೆಯಾಗಿದ್ದಾನೆ ಎಂದು ನೀಡಲಾದ ದೂರಿನ ತನಿಖೆ ವೇಳೆ ಪೊಲೀಸರಿಗೆ ಈ ಆಘಾತಕಾರಿ ಸಂಗತಿ ತಿಳಿದುಬಂದಿದೆ.
ಗುಜರಾತಿನ ಅಹಮದಾಬಾದ್ ಗ್ರಾಮಾಂತರ ಜಿಲ್ಲೆಯ ವೀರಂಗಂ ಠಾಣೆಯ ವ್ಯಾಪ್ತಿಯ ನಿವಾಸಿಗಳಾದ ಜೋಸ್ನಾ ಪಟೇಲ್ ಮತ್ತು ಆಕೆಯ ಮೈದುನ ರಮೇಶ್ ಪಟೇಲ್ರನ್ನು ಹಾರ್ದಿಕ್ ಪಟೇಲ್ ಎಂಬ ಬಾಲಕನ ಕೊಲೆ ಮಾಡಿ, ಸಾಕ್ಷ್ಯಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಬಂಧಿಸಲಾಗಿದೆ.
ಇದನ್ನೂ ಓದಿ: ಮಾಜಿ ಸಚಿವನ ಸುತ್ತುಕೊಂಡ ಸ್ವೀಟ್ಸ್ ಹಗರಣ: 1.50 ಟನ್ ಸಿಹಿತಿನಿಸು ‘ಗುಳುಂ’
ತಮ್ಮ ಅಕ್ರಮ ಸಂಬಂಧದ ಬಗ್ಗೆ ಹಾರ್ದಿಕ್ಗೆ ತಿಳಿದುಬಂದದ್ದರಿಂದ ಕುಟುಂಬದವರಿಗೆ, ಗ್ರಾಮದವರಿಗೆ ಹೇಳಿಬಿಡುತ್ತಾನೆ ಎಂದು ಆರೋಪಿಗಳು ಹೆದರಿದರು. ಸೆಪ್ಟೆಂಬರ್ 28, 2018 ರಂದು ಬಾಲಕನನ್ನು ಜಲಂಪುರ ಗ್ರಾಮದ ದೂರದ ಜಮೀನಿಗೆ ಕರೆದೊಯ್ದು ಕತ್ತು ಹಿಸುಕಿ ಸಾಯಿಸಿದರು. ದೇಹವನ್ನು ಸುಟ್ಟು ಹೂತುಹಾಕಿದ್ದರು. ನಂತರ ಅವನು ಕಾಣೆಯಾಗಿದ್ದಾನೆ ಎಂಬಂತೆ ನಟಿಸಿದ್ದರು ಎನ್ನಲಾಗಿದೆ.
ಬಾಲಕನ ತಂದೆ ಹಾಗೂ ಆರೋಪಿ ಜೋಸ್ನಾಳ ಪತಿ ಜಗದೀಶ್ ಪಟೇಲ್, ಅಂಗಡಿಯಿಂದ ಸಿಹಿತಿನಿಸು ತರಲು ಹೋದ ಬಾಲಕ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಯಾರೋ ಆತನನ್ನು ಅಪಹರಿಸಿದ್ದಾರೆ ಎಂದೇ ಭಾವಿಸಿ ತನಿಖೆ ನಡೆಸಲಾಗುತ್ತಿತ್ತು. ಆದರೆ ಕುಟುಂಬದವರನ್ನು ವಿಚಾರಣೆಗೊಳಪಡಿಸಿದಾಗ ಜೋಸ್ನಾ ಮತ್ತು ರಮೇಶ್ರ ಹೇಳಿಕೆಗಳು ಅನುಮಾನ ಮೂಡಿಸಿದ್ದು, ಅವರ ಅಪರಾಧ ಬೆಳಕಿಗೆ ಬಂತು ಎಂದು ವೀರಂಗಂ ಗ್ರಾಮೀಣ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)