ಬೆಂಗಳೂರು: ನಗರದ ಬೌರಿಂಗ್ ಮತ್ತು ಲೇಡಿಕರ್ಜನ್ ಆಸ್ಪತ್ರೆಗೆ ಬುಧವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಪಿ.ಎಸ್. ದಿನೇಶ್ ಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಒಳರೋಗಿ ವಿಭಾಗ, ರಕ್ತ ನಿಧಿ, ತೀವ್ರ ನಿಗಾ ಘಟಕ, ಕೋವಿಡ್ ವಾರ್ಡ್ ಸೇರಿ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ಆಸ್ಪತ್ರೆಯಲ್ಲಿನ ಸೇವೆ ಕುರಿತು ಮಾಹಿತಿ ಪಡೆದರು. ಕೆಲವರು ವ್ಯವಸ್ಥೆ ಹಾಗೂ ವೈದ್ಯಕೀಯ ಸಿಬ್ಬಂದಿಯ ವರ್ತನೆ ಬಗ್ಗೆ ದೂರಿದರು. ಈ ಬಗ್ಗೆ ಕ್ರಮವಹಿಸಿ, ವ್ಯವಸ್ಥೆ ಹಾಗೂ ಹೊರರೋಗಿ ವಿಭಾಗದಲ್ಲಿ ನೋಂದಣಿ ಪ್ರಕ್ರಿಯೆ ಸೇರಿ ವಿವಿಧ ವ್ಯವಸ್ಥೆಯನ್ನು ಸುಧಾರಿಸುವಂತೆ ಆಸ್ಪತ್ರೆಯ ನಿರ್ದೇಶಕ ಡಾ. ಮನೋಜ್ ಕುಮಾರ್ ಅವರಿಗೆ ಸೂಚಿಸಿದರು.
ಹೊರರೋಗಿ ನೋಂದಣಿಗೆ ಹಾಗೂ ಔಷಧ ವಿಭಾಗದಲ್ಲಿ ರೋಗಿಗಳು ಸರದಿಯಲ್ಲಿ ಕಾಯುತ್ತಿರುವುದನ್ನು ಗಮನಿಸಿದ ಅವರು, ರೋಗಿಗಳನ್ನು ಏಕೆ ಈ ರೀತಿ ಕಾಯಿಸುತ್ತೀರಿ ? ಕೌಂಟರ್ಗಳ ಸಂಖ್ಯೆಯನ್ನು ಏಕೆ ಹೆಚ್ಚಿಸಿಲ್ಲ ಎಂದು ವೈದ್ಯರನ್ನು ಪ್ರಶ್ನಿಸಿದರು.