ನವದೆಹಲಿ: ದೆಹಲಿಯ ಲೇಡಿ ಹರ್ಡಿಂಗೆ ಆಸ್ಪತ್ರೆಯಲ್ಲಿ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಮಾಜಿ ಬೌನ್ಸರ್ಗಳು ರೋಡ್ ರೇಜ್ (ರಸ್ತೆ ಕ್ರೋಧ-ಮೊತ್ತೊಬ್ಬ ವಾಹನ ಚಾಲಕನ ಕಿಡಿಗೇಡಿತನದಿಂದ ವಾಹನದ ಚಾಲಕನೊಬ್ಬ ಸಿಟ್ಟಾಗುವುದು) ನಾಟಕವಾಡಿ ವಾಹನಗಳನ್ನು ಕದಿಯುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಇದೀಗ ಅವರು ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾರೆ.
ದೀಪಕ್ ದಲಾಲ್, ಬ್ರಿಜ್ ಬಿಹಾರಿ ಮತ್ತು ನಿರಾಲಾ ಬಂಧಿತರು. ಈ ಹಿಂದೆ ಬೌನ್ಸರ್ಗಳಾಗಿ ಕೆಲಸ ಮಾಡುತ್ತಿದ್ದ ಇವರನ್ನು ಖಾಸಗಿ ಗುತ್ತಿಗೆದಾರನೊಬ್ಬ ಲೇಡಿ ಹರ್ಡಿಂಗೆ ಆಸ್ಪತ್ರೆಯ ಭದ್ರತಾ ವಿಭಾಗಕ್ಕೆ ನೇಮಕ ಮಾಡಿಕೊಂಡಿದ್ದ. ಗುತ್ತಿಗೆ ಅವಧಿ ಮುಗಿದ ಬಳಿಕ ಗುತ್ತಿಗೆದಾರ ಇವರನ್ನು ಕೆಲಸದಿಂದ ವಜಾ ಮಾಡಿದ್ದ. ಆನಂತರದಲ್ಲಿ ಈ ಮೂವರು ವಾಹನ ಕದಿಯುವುದನ್ನೇ ವೃತ್ತಿ ಮಾಡಿಕೊಂಡಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಈ ಮೂವರು ಕಾರೊಂದನ್ನು ನಿಲ್ಲಿಸಿಕೊಂಡು ಶಾಲಿಮಾರ್ ಪ್ಯಾಲೇಸ್ ಬ್ಯಾಂಕ್ವೆಟ್ ಹಾಲ್ ಬಳಿ ನಿಂತಿದ್ದರು. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದ ಎಕ್ಸ್ಯುವಿ-500 ವಾಹವನ್ನು ಗುರಿಯಾಗಿಸಿಕೊಂಡು ಅದನ್ನು ಬೆನ್ನಟ್ಟಿದ್ದರು. ಕೊನೆಗೂ ಆ ವಾಹನವನ್ನು ನಿಲ್ಲಿಸುವಲ್ಲಿ ಸಫಲರಾದ ಅವರು, ತಮ್ಮ ವಾಹನಕ್ಕೆ ತಾಗಿಸಿಕೊಂಡು ಹೋಗಿದ್ದಾಗಿ ಹೇಳಿ ಚಾಲಕ ಬ್ರಿಜ್ ಮೋಹನ್ ಶ್ರೀವಾಸ್ತವ ಜತೆ ಜಗಳ ತೆಗೆದಿದ್ದರು.
ಇದನ್ನೂ ಓದಿ: ಪ್ರವಾಹದ ನಡುವೆ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ್ದು ಹೀಗೆ ನೋಡಿ…
ಜಗಳವಾಡುತ್ತಿರುವಂತೆ ಮೂವರು ಬೌನ್ಸರ್ಗಳ ಪೈಕಿ ಒಬ್ಬಾತ ಮುಂಬಾಗಿಲು ತೆಗೆದು ಚಾಲಕನ ಸ್ಥಾನದಲ್ಲಿದ್ದ ಬ್ರಿಜ್ ಮೋಹನ್ ಶ್ರೀವಾಸ್ತವರನ್ನು ಬಲವಂತವಾಗಿ ಪಕ್ಕಕ್ಕೆ ಸರಿಸಿ ವರ್ತುಲ ರಸ್ತೆಯಲ್ಲಿ ನಿರಹಂಕಾರಿ ಮಂಡಲ್ ಗೇಟ್ನತ್ತ ತೆರಳಿದ್ದರು. ಇಲ್ಲಿನ ನಿರ್ಜನ ಪ್ರದೇಶದಲ್ಲಿ ವಾಹನದ ಮಾಲೀಕನನ್ನು ಹೊರದಬ್ಬಿದ ಕಾರುಗಳ್ಳರು ವಾಹನ ಸಮೇತ ಪರಾರಿಯಾಗಿದ್ದರು.
ಅದೃಷ್ಟವಶಾತ್ ಬ್ರಿಜ್ ಮೋಹನ್ ಶ್ರೀವಾಸ್ತವ ಬಳಿಯಿದ್ದ ಮೊಬೈಲ್ ಫೋನ್ ಕಸಿದುಕೊಳ್ಳಲು ಅವರು ಮರೆತಿದ್ದರು. ಹಾಗಾಗಿ ಬ್ರಿಜ್ ಮೋಹನ್ ಶ್ರೀವಾಸ್ತವ ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿ ಘಟನೆಯನ್ನು ವಿವರಿಸಿದ್ದರು.
ತಕ್ಷಣವೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಬೌನ್ಸರ್ಗಳು ಕದ್ದಿದ್ದ ಎಕ್ಸ್ಯುವಿ-500ನ ಬೆನ್ನುಬಿದ್ದಿದ್ದರು. ಸಾಕಷ್ಟು ದೂರ ಚೇಸ್ ಮಾಡಿದರೂ ವಾಹನವನ್ನು ಹಿಂದಿಕ್ಕಲು ಅವರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಅಕ್ಕಪಕ್ಕದ ಎಲ್ಲ ಪೊಲೀಸ್ ಠಾಣೆಗಳಿಗೆ ವಾಹನದ ನೋಂದಣಿ ಸಂಖ್ಯೆ ರವಾನಿಸಿ, ನಾಕಾಬಂದಿ ಏರ್ಪಡಿಸಿ ಕೊನೆಗೂ ಕಾರುಗಳ್ಳರನ್ನು ಹಿಡಿಯುವಲ್ಲಿ ಸಫಲರಾದರು.
ಅಯೋಧ್ಯೆ ರಾಮಮಂದಿರದಲ್ಲಿ ಶಿವನಿಗೂ ಸಿಗಲಿ ಸ್ಥಾನ