ಸಂಬರಗಿ: ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ ಮೂರನೇ ದಿನವು ಮುಂದುವರೆಯಿತು. ಶುಕ್ರವಾರ ಎಲ್ಲೆಡೆ ಪ್ರಯಾಣಿಕರು ಪರದಾಡಿದರು. ಆದರೆ, ಮಹಾರಾಷ್ಟ್ರದ ಗಡಿ ಜಿಲ್ಲೆಯಲ್ಲಿರುವ ಜತ್ತ, ಮಿರಜ, ಕವಟೆ ಮಹಾಂಕಾಳ ಘಟಕದ ಬಸ್ಸುಗಳು ಗಡಿ ಭಾಗದ ಗ್ರಾಮಗಳಲ್ಲಿ ಸೇವೆ ಒದಗಿಸಿದವು. ಇದೀಗ ಗಡಿ ಭಾಗದ ಕನ್ನಡಿಗರ ಪ್ರಯಾಣಕ್ಕೆ ಮಹಾರಾಷ್ಟ್ರದ ಬಸ್ಸುಗಳೇ ಆಸರೆಯಾಗಿವೆ.
ಶಾಲಾ-ಕಾಲೇಜಿಗೆ ಹೊರಡಲು ಬಸ್ ಪಾಸ್ ಪಡೆದಿದ್ದ ವಿದ್ಯಾರ್ಥಿಗಳು ಹಾಗೂ ತಿಂಗಳ ಪಾಸ್ ಪಡೆದಿದ್ದ ಶಾಲಾ ಶಿಕ್ಷಕರು ಸೇರಿದಂತೆ ಇನ್ನಿತರ ಸರ್ಕಾರಿ ಇಲಾಖೆಗಳ ಸಿಬ್ಬಂದಿ ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗಲು ತೊಂದರೆ ಅನುಭವಿಸುವಂತಾಗಿದೆ. ಆಗೊಂದು ಈಗೊಂದು ಬರುವ ಕೆಲವೇ ಕೆಲವು ಮಹಾರಾಷ್ಟ್ರದ ಬಸ್ಗಳಲ್ಲಿ ಸಂಚರಿಸಿದ್ದಾರೆ.
ಗುಂಡೆವಾಡಿ, ಬಳ್ಳಿಗೇರಿ, ಅನಂತಪುರ, ಪಾರ್ಥನಹಳ್ಳಿ ಸೇರಿದಂತೆ ಈ ಭಾಗದಿಂದ ಬರುವ ವಿದ್ಯಾರ್ಥಿಗಳು ತೀವ್ರ ಪರದಾಡುವಂತಾಗಿದೆ. ಈಗಾಗಲೇ ಹಲವೆಡೆ ಕಾಲೇಜು ಪರೀಕ್ಷೆಗಳು ನಡೆಯುತಲಿದ್ದು, ಗ್ರಾಮೀಣ ಭಾಗದಲ್ಲಿ ಯಾವುದೇ ಬಸ್ ಸಂಚಾರ ಇಲ್ಲದೆ ಭಾರಿ ತೊಂದರೆಯಾಗಿದೆ.