ನವದೆಹಲಿ: ಭಾರತೀಯ ರೈಲ್ವೆ ಜೂನ್ 1ರಿಂದ ಆರಂಭಿಸಲು ಉದ್ದೇಶಿಸಿರುವ 200 ಪ್ಯಾಸೆಂಜರ್ ರೈಲುಗಳ ಟಿಕೆಟ್ ಬುಕ್ಕಿಂಗ್ ಗುರುವಾರ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿದೆ. ಐಆರ್ಸಿಟಿಸಿ ವೆಬ್ಸೈಟ್ ಅಥವಾ ಆ್ಯಪ್ ಮೂಲಕ ಎಸಿ ಮತ್ತು ನಾನ್ ಎಸಿ ಬೋಗಿಗಳಲ್ಲಿ ಸಂಚರಿಸಲು ಟಿಕೆಟ್ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.
ಜೂನ್ 1ರಿಂದ ಸಂಚಾರ ಆರಂಭಿಸಲಿರುವ 200 ಪ್ಯಾಸೆಂಜರ್ ರೈಲುಗಳ ಪೈಕಿ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್, ನೇತ್ರಾವತಿ ಎಕ್ಸ್ಪ್ರೆಸ್ ಮತ್ತು ಹೌರಾದಿಂದ ಯಶಂತಪುರಕ್ಕೆ ಬರುವ ಡುರಾಂಟೋ ಎಕ್ಸ್ಪ್ರೆಸ್ ರೈಲುಗಳು ಕರ್ನಾಟಕಕ್ಕೆ ಸಂಪರ್ಕ ಒದಗಿಸಲಿವೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಭಾರತೀಯ ರೈಲ್ವೆ, ನಿಗದಿತ ರೈಲು ಹೊರಡುವ 2 ಗಂಟೆ ಮುಂಚಿನವರೆಗೂ ಟಿಕೆಟ್ಗಳನ್ನು ಕಾಯ್ದಿರಿಸಬಹುದಾಗಿದೆ. ಜತೆಗೆ 30 ದಿನಗಳ ಅವಧಿಯವರೆಗೂ ಟಿಕೆಟ್ಗಳನ್ನು ಕಾಯ್ದಿರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ: ಪತ್ನಿಯ ನಿಧನದ ಸುದ್ದಿ ಕೇಳಿ ಪತಿಗೂ ಹೃದಯಾಘಾತ
ಟಿಕೆಟ್ಗಳನ್ನು ಮುಂಗಡವಾಗಿ ಕಾಯ್ದಿರಿಸಿರುವವರು ತಮ್ಮ ರೈಲುಗಳು ಹೊರಡುವ 90 ನಿಮಿಷಗಳ ಮೊದಲೇ ರೈಲ್ವೆ ನಿಲ್ದಾಣಕ್ಕೆ ಬರುವುದು ಕಡ್ಡಾಯವಾಗಿದೆ. ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ದೇಹದ ಉಷ್ಣಾಂಶ ಪರೀಕ್ಷಿಸುವುದು ಹಾಗೂ ಲಗೇಜ್ಗಳನ್ನು ಸ್ಯಾನಿಟೈಸ್ ಮಾಡುವುದು ಸೇರಿ ಇನ್ನಿತರ ಕಾರ್ಯಗಳನ್ನು ಮಾಡಬೇಕಿರುವುದು ಇದಕ್ಕೆ ಕಾರಣ. ಪರೀಕ್ಷೆಯ ವೇಳೆ ಕೋವಿಡ್ 19 ಲಕ್ಷಣಗಳನ್ನು ಕಂಡು ಬಂದಲ್ಲಿ, ಅಂಥವರಿಗೆ ಪ್ರಯಾಣಿಸಲು ಅವಕಾಶ ನಿರಾಕರಿಸಲಾಗುತ್ತದೆ. ಜತೆಗೆ ಅವರಿಗೆ ಶೇ.100 ಟಿಕೆಟ್ ಹಣವನ್ನು ಹಿಂದಿರುಗಿಸಲಾಗುತ್ತದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಹಾಗೂ ತಮ್ಮ ಮೊಬೈಲ್ನಲ್ಲಿ ಆರೋಗ್ಯಸೇತು ಆ್ಯಪ್ ಡೌನ್ಲೋಡ್ ಮಾಡಿಕೊಂಡಿರುವುದು ಕಡ್ಡಾಯವಾಗಿದೆ ಎಂದು ತಿಳಿಸಿದೆ.
ಟಿಕೆಟ್ಗಳನ್ನು ಮುಂಗಡವಾಗಿ ಕಾಯ್ದಿರಿಸುವಾಗ ಆರ್ಎಸಿ ಮತ್ತು ವೇಟೆಡ್ ಲಿಸ್ಟ್ ಟಿಕೆಟ್ಗಳಿಗೂ ಅವಕಾಶ ನೀಡಲಾಗುತ್ತದೆ. ಆರ್ಎಸಿ ಟಿಕೆಟ್ ಹೊಂದಿರುವವರಿಗೆ ಒಂದೇ ಸೀಟ್ನಲ್ಲಿ ಇಬ್ಬರಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಆದರೆ ಚಾರ್ಟ್ ಸಿದ್ಧವಾದ ನಂತರದಲ್ಲಿ ಟಿಕೆಟ್ ಕನ್ಫರ್ಮ್ ಆಗದೇ ಇದ್ದರೆ, ಅಂಥವರಿಗೆ ಪ್ರಯಾಣಿಸಲು ಅವಕಾಶ ನಿರಾಕರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಎಲ್ಲ ರೈಲು ನಿಲ್ದಾಣಗಳಲ್ಲೂ ಹೋಟೆಲ್ಗಳು ಕಾರ್ಯನಿರ್ವಹಿಸುತ್ತವೆ. ಆದರೆ, ಅಲ್ಲೇ ತಿನ್ನಲು ಅವಕಾಶ ನೀಡಲಾಗುವುದಿಲ್ಲ. ಬದಲಿಗೆ ಪಾರ್ಸೆಲ್ ತಂದು ರೈಲಿನಲ್ಲಿ ತಿನ್ನಲು ಅಡ್ಡಿಯಿಲ್ಲ ಎಂದು ಹೇಳಿದೆ.
ಅಂಫಾನ್ ಚಂಡಮಾರುತಕ್ಕೆ 12 ಬಲಿ: ಕರೊನಾಗಿಂತ ಭೀಕರ ಎಂದ ಸಿಎಂ ಮಮತಾ ಬ್ಯಾನರ್ಜಿ