ಶಿವಮೊಗ್ಗ: ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ 20 ವರ್ಷಗಳಾದರೂ ಮನೆ ಕಟ್ಟಿಕೊಂಡು ವಾಸವಾಗಿರದ 543 ಖಾಲಿ ನಿವೇಶನಗಳನ್ನು ಆಶ್ರಯ ಸಮಿತಿ ರದ್ದುಗೊಳಿಸಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ತಿಳಿಸಿದ್ದಾರೆ.
1997ರಲ್ಲಿ ಆಶ್ರಯ ಯೋಜನೆಯಡಿ ಬೊಮ್ಮನಕಟ್ಟೆಯಲ್ಲಿ ಎ ಯಿಂದ ಜಿ ಬ್ಲಾಕ್ವರೆಗೆ ನಿವೇಶನರಹಿತರಿಗೆ ನಿವೇಶನ ಹಂಚಲಾಗಿತ್ತು. ಫಲಾನುಭವಿಗಳು 20 ವರ್ಷವಾದರೂ ವಾಸವಿಲ್ಲದ ಕಾರಣ ಆಶ್ರಯ ಸಮಿತಿ ಸಭೆ ನಡೆಸಿ ಖಾಲಿ ಇರುವ ನಿವೇಶನಗಳ ಮಹಜರ್(ಸ್ಥಳ ಪರಿಶೀಲನಾ ವರದಿ) ಪಡೆದು ಖಾಲಿ ನಿವೇಶನ ರದ್ದುಪಡಿಸಿದೆ ಎಂದಿದ್ದಾರೆ.
ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳದೇ ನಿವೇಶನ ಖಾಲಿ ಬಿಟ್ಟು ನಿಯಮ ಉಲ್ಲಂಘಿಸಿದ್ದಾರೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸದುಪಯೋಗಪಡಿಸಿಕೊಂಡಿಲ್ಲ. ಈ ಬಗ್ಗೆ ಬಂದಿದ್ದ ಆಕ್ಷೇಪಣೆ ಇತ್ಯರ್ಥಪಡಿಸಿದ್ದು ಆ.10ರ ಆಶ್ರಯ ಸಭೆಯ ತೀರ್ಮಾನದಂತೆ ಖಾಲಿ ನಿವೇಶನಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.