ತಿರುವನಂತಪುರಂ: ಕಳೆದ ಮೂರ್ನಾಲ್ಕು ದಿನಗಳಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿದ್ದ ಸಲಿಂಗಿಯ ಮೃತದೇಹವನ್ನು ಕೇರಳ ಹೈಕೋರ್ಟ್, ಕುಟುಂಬದ ವಶಕ್ಕೆ ನೀಡಿದೆ. ಮೃತನ ಸಂಗಾತಿ ಕೊನೆಯ ಗೌರವ ಸೂಚಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಏನಿದು ಪ್ರಕರಣ?
ಜೆಬಿನ್ ಎಂಬಾತ ತನ್ನ ಸಲಿಂಗ ಸಂಗಾತಿ ಮನು ಜೊತೆ ಕೊಚ್ಚಿಯಲ್ಲಿ ವಾಸಿಸುತ್ತಿದ್ದ. ಫೆಬ್ರವರಿ 2ರಂದು ಮನು ತಮ್ಮ ನಿವಾಸದ ಟೆರೇಸ್ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ವೆಂಟಿಲೇಟರ್ನಲ್ಲಿದ್ದ ಮನು, ಫೆಬ್ರವರಿ 4ರ ರಾತ್ರಿ ನಿಧನರಾದರು. ಮನು ಅವರ ದೇಹವನ್ನು ಪಡೆಯಲು ಕುಟುಂಬದವರು ಸೇರಿದಂತೆ ಯಾರೊಬ್ಬರು ಮುಂದೆ ಬಾರದ ಕಾರಣ ಎರಡು ದಿನಗಳವರೆಗೆ ಮೃತದೇಹ ಆಸ್ಪತ್ರೆಯಲ್ಲೇ ಉಳಿಯಿತು. ಜೆಬಿನ್ ಅವರು ಮೃತದೇಹ ಪಡೆಯಲು ಮುಂದೆ ಬಂದರೂ ಕಾನೂನು ಅವರನ್ನು ಉತ್ತರಾಧಿಕಾರಿ ಎಂದು ಗುರುತಿಸಲಿಲ್ಲ.
ಇದಾದ ಬಳಿಕ ಜೆಬಿನ್, ತನ್ನ ಸಂಗಾತಿಯ ಮೃತದೇಹವನ್ನು ಪಡೆಯಲು ಅನುಮತಿ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಸಂಗಾತಿ ಮೃತದೇಹ ನನಗೊಪ್ಪಿಸಿ ಎಂದು ಕಣ್ಣೀರು ಹಾಕಿದ್ದರು. ಹೈಕೋರ್ಟ್ ಕೂಡಲೇ ಅರ್ಜಿಯನ್ನು ಪರಿಶೀಲಿಸಿ ಖಾಸಗಿ ಆಸ್ಪತ್ರೆಗೆ ಇಮೇಲ್ ಮೂಲಕ ನೋಟಿಸ್ ಕಳುಹಿಸಿದೆ. ಫೆಬ್ರವರಿ 6 ರಂದು ವಿಚಾರಣೆಯ ಸಂದರ್ಭದಲ್ಲಿ ಹಕ್ಕು ಪಡೆಯದ ದೇಹಗಳಿಗೆ ಸರ್ಕಾರಿ ಪ್ರೋಟೋಕಾಲ್ ಬಗ್ಗೆ ವಿವರಣೆಯನ್ನು ಹೈಕೋರ್ಟ್ ಕೋರಿತು.
ಪ್ರೋಟೋಕಾಲ್ ಪ್ರಕಾರ ಸ್ವಂತ ಅಥವಾ ಜೈವಿಕ ಕುಟುಂಬದ ಸದಸ್ಯರು ಅಥವಾ ಕಾನೂನು ಉತ್ತರಾಧಿಕಾರಿಗಳು ದೇಹವನ್ನು ಪಡೆಯಲು ವಿಫಲವಾದಾಗ, ಆ ದೇಹವನ್ನು ಸಾಮಾನ್ಯವಾಗಿ ವೈದ್ಯಕೀಯ ಸಂಶೋಧನೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಗುತ್ತದೆ.
ಕೋರ್ಟ್ ತೀರ್ಪು
ನಿನ್ನೆ ವಿಚಾರಣೆಗೆ ನಡೆಸಿದ ಕೇರಳ ಹೈಕೋರ್ಟ್ ಮೃತದೇಹವನ್ನು ಮನು ಕುಟುಂಬಸ್ಥರ ವಶಕ್ಕೆ ನೀಡಿದೆ. ಕಲಮಸ್ಸೆರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊನೆಯ ಗೌರವ ಸೂಚಿಸಬಹುದು ಎಂದು ಸಂಗಾತಿ ಜೆಬಿನ್ಗೆ ಕೋರ್ಟ್ ತಿಳಿಸಿದ್ದು, ನಿನ್ನೆ ಮನು ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ.
ಅಂದಹಾಗೆ ಮನು ಮತ್ತು ಜೆಬಿನ್ ಕೇರಳದಲ್ಲಿ ವಿವಾಹವಾದ ಮೂರನೇ ಸಲಿಂಗಕಾಮಿ ಜೋಡಿ. ಜೆಬಿನ್ ಅವರ ಪರ ವಕಾಲತು ವಹಿಸಿದ ಕೇರಳದ ಮೊದಲ ಟ್ರಾನ್ಸ್ಜೆಂಡರ್ ವಕೀಲರಾದ ಪದ್ಮಾ ಲಕ್ಷ್ಮಿ, ಇದು ಸಲಿಂಗಿ ವ್ಯಕ್ತಿಯ ಹಕ್ಕುಗಳಿಗೆ ಸಂಬಂಧಿಸಿದೆ ಮತ್ತು ಮನು ದೇಹವು ಪ್ರತಿ ಧಾರ್ಮಿಕ ಆಚರಣೆ ಸ್ವೀಕರಿಸುವ ಹಕ್ಕನ್ನು ಹೊಂದಿದೆ ಎಂದು ಪ್ರತಿಪಾದಿಸಿದ್ದರು. (ಏಜೆನ್ಸೀಸ್)
ಸಲಿಂಗ ಸಂಗಾತಿಯ ಮೃತದೇಹಕ್ಕಾಗಿ ಕೋರ್ಟ್ ಮೆಟ್ಟಿಲೇರಿ ಕಣ್ಣೀರಿಟ್ಟ ವ್ಯಕ್ತಿ! ಪ್ರೋಟೋಕಾಲ್ ಹೇಳೋದೇನು?
ಬಿಜೆಪಿಗೆ ಹತ್ತಿರವಾಗಲು ದಕ್ಷಿಣ ಭಾರತದ ಇಬ್ಬರು ನಾಯಕರ ನಡುವೆ ಪೈಪೋಟಿ; ಗೆಲ್ಲೋರ್ಯಾರು..?