ಬೆಂಗಳೂರು: ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಸಿಬ್ಬಂದಿ ಹಾಗೂ ವಿವಿಧ ನಿಗಮ-ಮಂಡಳಿಗಳ ನೌಕರರ ಅನುಕೂಲಕ್ಕಾಗಿ ಶುಕ್ರವಾರದಿಂದ ಬಿಎಂಟಿಸಿ ಬಸ್ ಸೇವೆ ಏರ್ಪಡಿಸಲಿರುವುದಾಗಿ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ. ಸತ್ಯವತಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕೋವಿಡ್ 19 ನಿಯಂತ್ರಿಸಲು ಕೇಂದ್ರ/ರಾಜ್ಯ ಸರ್ಕಾರಗಳು ಅಗತ್ಯ ಸೇವೆಗಳನ್ನು ಏರ್ಪಡಿಸಲು ಅನುಮತಿ ನೀಡಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಯ ಸಿಬ್ಬಂದಿ, ನೌಕರರು ಕರ್ತವ್ಯಕ್ಕೆ ಹಾಜರಾಗುವುದು ಕಡ್ಡಾಯವಾಗಿದೆ. ಈ ಕಾರಣದಿಂದ ಅವರ ಓಡಾಟಕ್ಕೆ ಅನುಕೂಲ ಮಾಡಿಕೊಡಲು ಶುಕ್ರವಾರದಿಂದ ಬಿಎಂಟಿಸಿ ಬಸ್ ಸೇವೆಗಳನ್ನು ಆರಂಭಿಸುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಸಂಕಷ್ಟದಲ್ಲಿದ್ದರೂ ನರೇಗಾ ಕಾರ್ಮಿಕರು ದೇಣಿಗೆ ಕೊಟ್ರು, ಏಕೆ?
ಸೇವೆ ಪಡೆಯುವುದು ಹೇಗೆ? ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸುವ ಸಿಬ್ಬಂದಿ, ನೌಕರರು ತಮ್ಮ ಗುರುತಿನ ಚೀಟಿ ತೋರಿಸುವುದು ಕಡ್ಡಾಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿರುವಂತೆ ದೈಹಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಬಸ್ಗಳಲ್ಲಿ ಟಿಕೆಟ್ಗಳನ್ನು ನೀಡುವುದಿಲ್ಲವಾದ್ದರಿಂದ, ಮಾಸಿಕ ಬಸ್ಪಾಸ್ಗಳನ್ನು ಖರೀದಿಸಿ, ಪ್ರಯಾಣಿಸಲು ಅನುವು ಮಾಡಿಕೊಟ್ಟಿರುವುದಾಗಿ ಎಂ. ಸತ್ಯವತಿ ಹೇಳಿದ್ದಾರೆ.
ಯಾರಿಗೆಲ್ಲ ಅನ್ವಯ: ಕೇಂದ್ರ/ರಾಜ್ಯ ಸರ್ಕಾರದ ನೌಕರರು, ಅರೆ ಸರ್ಕಾರಿ ಅಧಿಕಾರಿ/ನೌಕರರು, ನಿಗಮ-ಮಂಡಳಿಗಳ ಅಧಿಕಾರಿ, ನೌಕರರು, ಬ್ಯಾಂಕ್, ವಿಮೆ ಕಂಪನಿಗಳ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಪತ್ರಕರ್ತರು, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕ ಉದ್ದಿಮೆ ಅಧಿಕಾರಿ ಮತ್ತು ನೌಕರರಿಗೆ ಮಾತ್ರ ಬಿಎಂಟಿಸಿ ಸೇವೆ ಪಡೆಯಲು ಅವಕಾಶ ನೀಡಲಾಗಿದೆ.
ಲಾಕ್ಡೌನ್ನಿಂದಾಗಿ ಏರಿದೆ ನಿರುದ್ಯೋಗ ಪ್ರಮಾಣ, ಆದರೆ ಕೆಲಸಕ್ಕೆ ಜನರೇ ಸಿಗುತ್ತಿಲ್ಲ