ಶನಿವಾರಸಂತೆ: ರಕ್ತದಾನದಿಂದ ಆರೋಗ್ಯ ವೃದ್ಧಿಸುವುದರ ಜತೆಗೆ ರಕ್ತದೊತ್ತಡ, ಮಧುಮೇಹ ಮುಂತಾದ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ಶಿರಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶೋಕ್ ತಿಳಿಸಿದರು.
ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಮನುಷ್ಯನ ದೇಹದಲ್ಲಿ 5ರಿಂದ ಆರೂವರೆ ಲೀಟರ್ನಷ್ಟು ರಕ್ತ ಇದ್ದು, ದಾನ ಮಾಡುವ ವ್ಯಕ್ತಿಯಿಂದ ಕೇವಲ 350 ಮಿ.ಗ್ರಾಂ.ನಷ್ಟು ತೆಗೆದುಕೊಳ್ಳಲಾಗುತ್ತದೆ. ಇದರಿಂದ ರಕ್ತದಾನ ಮಾಡಲು ಭಯಪಡಬೇಕಾಗಿಲ್ಲ ಎಂದರು.
ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವಿನಯ್ ಮಾತನಾಡಿ, ಶಸ್ತ್ರ ಚಿಕಿತ್ಸೆ , ಹೆರಿಗೆ, ಅಪಘಾತ ಮುಂತಾದ ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತ ಕೊಡುವ ಅಗತ್ಯ ಇರುತ್ತದೆ. ರಕ್ತ ನಿಧಿ ಕೇಂದ್ರಗಳಲ್ಲಿ ಸಂಗ್ರಹದ ಕೊರತೆ ಇರುವುದರಿಂದ ಇದು ನಿವಾರಣೆಯಾಗಲು ರಕ್ತದಾನ ಶಿಬಿರಗಳ ಅವಶ್ಯಕತೆ ಇರುತ್ತದೆೆ ಎಂದರು.
ಮಡಿಕೇರಿ ಎಚ್ಡಿಎಫ್ಸಿ ಬ್ಯಾಂಕ್ ವ್ಯವಸ್ಥಾಪಕ ನಾರಾಯಣ್ ರಾಜೇಂದ್ರ, ಜಿಲ್ಲಾ ಆಸ್ಪತ್ರೆಯ ಡಾ.ದಿಲೀಪ್, ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್, ಉಪಾಧ್ಯಕ್ಷ ಭಟ್ಯನ ಈರಪ್ಪ, ಕಾರ್ಯದರ್ಶಿ ಕುಯುಮುಡಿ ಜಯಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿವೀಕ್ಷಕ ಪ್ರವೀಣ್ಕುಮಾರ್ ಇದ್ದರು.