ಸೋಮವಾರಪೇಟೆ: ರಕ್ತದಾನದಿಂದ ಮೂರು ಜೀವಗಳನ್ನು ಉಳಿಸುವುದರೊಂದಿಗೆ ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದು ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ ತಿಳಿಸಿದರು.
ಗೌಡಳ್ಳಿ ಗ್ರಾಮ ಪಂಚಾಯಿತಿ, ಪ್ರಾಥಮಿಕ ಅರೋಗ್ಯ ಕೇಂದ್ರದ ವತಿಯಿಂದ ಗ್ರಾಮದ ಶ್ರಿ ನವದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಶುಕ್ರವಾರ ಅಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ರಕ್ತಕ್ಕೆ ಪರ್ಯಾವಿಲ್ಲ. ಉತ್ಪಾದನೆಯೂ ಅಸಾಧ್ಯ. ಹೀಗಾಗಿ ರಕ್ತದಾನ ಅನಿವಾರ್ಯವಾಗಿದೆ. ಮೂಢನಂಬಿಕೆಯಿಂದ ಕೆಲವರು ರಕ್ತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ವಿಜ್ಞಾನದಲ್ಲಿ ಪ್ರಪಂಚ ತುಂಬಾ ಮುಂದುವರಿದೆ. ವೈಜ್ಞಾನಿಕ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಅರೋಗ್ಯವಂತ ವ್ಯಕ್ತಿ 18 ವಯಸ್ಸಿನಿಂದ 65 ವರ್ಷಗಳ ತನಕ ರಕ್ತದಾನ ಮಾಡಬಹುದು. ರಕ್ತದಾನದಿಂದ ಹೊಸ ರಕ್ತ 24 ಗಂಟೆಯೊಳಗೆ ಉತ್ಪಾದನೆಯಾಗುತ್ತದೆ. ಕೊಲೆಸ್ಟ್ರಾಲ್ ಹಿಡಿತಕ್ಕೆ ಬರುತ್ತದೆ. ಹೃದಯಸಂಬಂಧಿ ಕಾಯಿಲೆಗಳು ಹತೋಟಿಯಲ್ಲಿರುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದೆ. ಪ್ರತಿ ತಿಂಗಳು 19ರಷ್ಟು ರಕ್ತದಾನ ಶಿಬಿರಗಳನ್ನು ಮಾಡಬೇಕಿದೆ. ಅಪಘಾತ, ಹೆರಿಗೆ ಸಂದರ್ಭದಲ್ಲಿ ರಕ್ತ ಹೀನತೆ, ಮಕ್ಕಳು, ಹಿರಿಯರಿಗೆ ಅವಶ್ಯಕತೆ ಇದ್ದಾಗ ರಕ್ತ ನೀಡಲೇಬೇಕು. ಪ್ರತಿ ಪ್ರಾಥಮಿಕ ಅರೋಗ್ಯ ಕೇಂದ್ರ, ಸಂಘ ಸಂಸ್ಥೆಗಳು, ಗ್ರಾಮೀಣ ಭಾಗದಲ್ಲು ರಕ್ತದಾನ ಶಿಬಿರಗಳು ನಡೆಯಬೇಕು ಎಂದರು.
ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಳ್ಳಿ ನವೀನ್ ಮಾತನಾಡಿ, ನಿರಂತರವಾಗಿ ರಕ್ತದಾನ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು. ರಕ್ತದಾನಿ ವಿವರವನ್ನು ಆಧಾರ್ನೊಂದಿಗೆ ಲಿಂಕ್ ಮಾಡಬೇಕು. ರಕ್ತದಾನಿಗಳಿಗೆ ರಕ್ತದ ಅವಶ್ಯಕತೆ ಇದ್ದಾಗ ರಾಜ್ಯದ ಎಲ್ಲೆಡೆಯೂ ಉಚಿತವಾಗಿ ರಕ್ತ ಸಿಗುವಂತಾಗಬೇಕು ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷ ಗಣೇಶ್, ಪಿಡಿಒ ಲಿಖಿತಾ, ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ರಂಜಿತಾ, ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್, ಹಿರಿಯ ಅರೋಗ್ಯ ಪರಿವೀಕ್ಷಕಿ ಪಾರ್ವತಿ, ಸಮುದಾಯ ಅರೋಗ್ಯಾಧಿಕಾರಿ ಧರಣೇಶ್ ಇದ್ದರು.