ಬೆಂಗಳೂರು: ಲೋಕಾಯುಕ್ತ ಪೊಲೀಸರ ಸೋಗಿನಲ್ಲಿ ಬೆಸ್ಕಾಂ ಅಧಿಕಾರಿಗಳಿಗೆ ೆನ್ ಕರೆ ಮಾಡಿ ಬ್ಲ್ಯಾಕ್ಮೇಲ್ ಮಾಡಿ ಹಣಕ್ಕೆ ಬೇಡಿಕೆ ಒಡ್ಡಿರುವುದು ಬೆಳಕಿಗೆ ಬಂದಿದೆ.
ಕೆ.ಆರ್. ಸರ್ಕಲ್ ಬೆಸ್ಕಾಂ ಕಚೇರಿ ಅಧಿಕಾರಿ ಎ.ಆರ್. ಮೃತ್ಯುಂಜಯ ಕೊಟ್ಟ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ರಾತ್ರಿ 8 ಗಂಟೆಯಲ್ಲಿ ಮೃತ್ಯುಂಜಯ ಅವರಿಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ, ಲೋಕಾಯುಕ್ತ ಪೊಲೀಸ್ ಎಂದು ಪರಿಚಯ ಮಾಡಿಕೊಂಡಿದ್ದ. ನಂತರ, ಬೆಸ್ಕಾಂ ನಿರ್ದೇಶಕ ಮಹಾಂತೇಶ ಬೀಳಗಿ ಮತ್ತು ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಆಪ್ತ ಕಾರ್ಯದರ್ಶಿ ಪಿ. ಚಂದ್ರಶೇಖರ್ ಮತ್ತು ತಾಂತ್ರಿಕ ಸಹಾಯಕ ಎಸ್.ವಿ. ನವನೀತ್ ಕೃಷ್ಣನ್ ಹೆಸರು ಪ್ರಸ್ತಾಪಿಸಿದ್ದ.
ಬಳಿಕ ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಲ್ಲಿಗೆ ಬಿಡಬೇಕೆಂದರೆ ಹಣ ಕೊಡಬೇಕೆಂದು ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಈತ ನಕಲಿ ಎಂಬುದು ಗೊತ್ತಾಗಿ ದೂರು ನೀಡಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.