ಮಂಗಳೂರು: ಕಾಂಗ್ರೆಸ್ನ ಗ್ಯಾರಂಟಿಗಳನ್ನು ಅವಹೇಳನ ಮಾಡಿದ ಬಿಜೆಪಿಗರು ಈಗ ಮೋದಿ ಗ್ಯಾರಂಟಿ ಹಿಡಿದುಕೊಂಡು ಹೋಗುತ್ತಿದ್ದಾರೆ. ಆದರೆ ಜನರಿಗೆ ಅವರ ಸುಳ್ಳು ಭರವಸೆಗಳ ಬಗ್ಗೆ ಅರಿವಿದೆ. ಬಿಜೆಪಿಯದ್ದು ಸಂಕಲ್ಪ ಪತ್ರ ಅಲ್ಲ, ಸುಳ್ಳು ಪತ್ರ ಎಂದು ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಚ್ಛೇದಿನ್ ಎಂದ ಕೇಂದ್ರ ಬಿಜೆಪಿ ಸರ್ಕಾರ ಆಹಾರ ಪದಾರ್ಥಗಳು, ಪೆಟ್ರೋಲ್- ಡೀಸೆಲ್, ಗ್ಯಾಸ್, ಇನ್ನಿತರ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕಿತ್ತು. ಆದರೆ ಬೆಲೆ ದುಪ್ಪಟ್ಟಾಗಿದೆ. ನೀಡಿದ ಭರವಸೆಗಳನ್ನು ಈಡೇರಿಸದೆ ಮತ್ತೆ ಬಂದು ಓಟು ಕೊಡಿ ಅಂತಿದ್ದಾರೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗೊಳಿಸಿದಾಗ ಬಿಜೆಪಿಯವರು ಗೇಲಿ ಮಾಡಿದರು. ಗ್ಯಾರಂಟಿಗಳಿಂದ ಎಷ್ಟು ಮಹಿಳೆಯರಿಗೆ ಅನುಕೂಲ ಆಗಿದೆ ಗೊತ್ತಿದೆಯಾ ನಿಮಗೆ? ಇದು ನಿಜವಾದ ಅಚ್ಛೇದಿನ್ ಎಂದರು.
2014ರಲ್ಲಿ ಬೆಲೆ ಏರಿಕೆಯಾಗಿದೆ, ಬದಲಾವಣೆ ಬೇಕು ಅಂತ ಬಿಜೆಪಿಯವರು ಹೇಳಿದ್ದನ್ನು ನಂಬಿ ಜನ ಓಟು ಹಾಕಿ ಗೆಲ್ಲಿಸಿದರು. ಈ 10 ವರ್ಷಗಳಲ್ಲಿ ಬೆಲೆ ಕಡಿಮೆ ಮಾಡದೆ ಪ್ರತಿಯೊಂದಕ್ಕೂ ತೆರಿಗೆ ಹಾಕಿ ಜನರ ಕೈಗೆಟುಕದಂತೆ ಮಾಡಿದ್ದಾರೆ. ಬಿಜೆಪಿ ಅವಧಿಯಲ್ಲಿ ಜನಜೀವನ ಏನಾದರೂ ಬದಲಾಗಿದೆಯಾ? ಈಗ ಮತ್ತೆ ಅದೇ ಸ್ಲೋಗನ್ ಹಿಡಿದುಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.
ದಕ್ಷಿಣ ಕನ್ನಡದಲ್ಲಿ 33 ವರ್ಷಗಳಿಂದ ಲೋಕಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ. ಇಲ್ಲಿನ ಬಿಜೆಪಿ ಸಂಸದರಿಂದ ಜನರಿಗೆ ಏನು ನ್ಯಾಯ ಸಿಕ್ಕಿದೆ ಹೇಳಲಿ ಎಂದು ಸವಾಲು ಹಾಕಿದರು.
ಹುಬ್ಬಳ್ಳಿಯಲ್ಲಿ ನಡೆದಿರುವ ಹತ್ಯೆ ವಿಚಾರ ಬಹಳ ನೋವಿನ ಸಂಗತಿ. ಈ ಘಟನೆಯನ್ನು ಪಕ್ಷಾತೀತವಾಗಿ ಖಂಡಿಸಬೇಕಾಗಿದೆ. ಆರೋಪಿಗೆ ಉಗ್ರ ಶಿಕ್ಷೆ ನೀಡಬೇಕಿದೆ. ಘಟನೆ ನಡೆದ ಗಂಟೆಯೊಳಗೆ ಆರೋಪಿಯ ಬಂಧನ ಮಾಡುವ ಕೆಲಸ ನಡೆದಿದೆ. ಇಂಥ ಆರೋಪಿಗಳ ಪರ ಯಾರೂ ನಿಲ್ಲಬಾರದು ಎಂದು ಪುಷ್ಪಾ ಅಮರನಾಥ್ ಹೇಳಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ, ಮುಖಂಡರಾದ ಚಂದ್ರಕಲಾ, ಶೈಲಜಾ, ರೂಪಾ ಚೇತನ್, ಶಾಂತಲಾ ಗಟ್ಟಿ, ಶಶಿಕಲಾ, ಚಂದ್ರಕಲಾ ಜೋಗಿ, ವೃಂದಾ ಪೂಜಾರಿ, ಸಾರಿಕಾ ಪೂಜಾರಿ ಮತ್ತಿತರರಿದ್ದರು.