ಮುಂಬೈ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22, 2024ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ವಿಪಕ್ಷಗಳು ಆಡಳಿತರೂಢ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ವಿವಾದಕ್ಕೆ ಆಸ್ಪದ ಮಾಡಿಕೊಡುತ್ತಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ.
ಇದೀಗ ರಾಮಮಂದಿರ ವಿಚಾರವಾಗಿ ಮಾತನಾಡಿರುವ ಶಿವಸೇನೆ (UBT) ನಾಯಕ ಸಂಜಯ್ ರಾವತ್, ಬಿಜೆಪಿಯವರು ಪ್ರಭು ಶ್ರೀರಾಮಚಂದ್ರನನ್ನು ತನ್ನ ಚುನಾವಣಾ ಅಭ್ಯರ್ಥಿಯನ್ನಾಗಿ ಘೋಷಿಸುವುದೊಂದೇ ಬಾಕಿ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಸಂಜಯ್ ರಾವತ್, ಬಿಜೆಪಿ ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ರಾಮನನ್ನೇ ತಮ್ಮ ಅಭ್ಯರ್ಥಿ ಎಂದು ಘೋಷಿಸಿದರೆ ಏನು ಅಚ್ಚರಿ ಪಡಬೇಕಾಗಿಲ್ಲ. ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ದಿಗ್ಗಜನ ಮತ್ತೊಂದು ದಾಖಲೆ ಮುರಿಯುವ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಗೆ ಒಬ್ಬನೇ ಒಬ್ಬ ಸಂಸದ ಇಲ್ಲ. ಶಿವಸೇನೆಯಿಂದ ಒಟ್ಟು 18 ಸಂಸದರು ಆಯ್ಕೆಯಾಗಿದ್ದು, ಈ ಪೈಕಿ 6 ಮಂದಿ ನಮ್ಮ ಬಣದಲ್ಲಿದ್ದಾರೆ. ಹಾಗಾಗಿ ನಾವು ಕಾಂಗ್ರೆಸ್ಗೆ 23 ಸ್ಥಾನಗಳನ್ನು ಬಿಟ್ಟುಕೊಡುವಂತೆ ಕೇಳಿದ್ದೆವು. ನಮ್ಮ ಮೈತ್ರಿ ಕಾಂಗ್ರೆಸ್ನೊಂದಿಗೆ ಇದೆ ಮತ್ತು ಮಹಾ ವಿಕಾಸ್ ಅಘಾಡಿ ಸುಮಾರು 40 ಸ್ಥಾನಗಳನ್ನು ಗೆಲ್ಲುತ್ತದೆ.
ಬಿಜೆಪಿ ಒಂಟಿಯಾಗಿ ಗೆಲ್ಲಲು ಸಾಧ್ಯವಿಲ್ಲ. ಅದಕ್ಕೆ ಇವಿಎಂ ಸಹಾಯ ಬೇಕು. ಇವಿಎಂ ಜೊತೆ ಅದು ಮೈತ್ರಿ ಮಾಡಿಕೊಂಡಿದ್ದು, ಆಡಳಿತವಿರೋಧಿ ಅಲೆಯಿದ್ದರು ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಶಿವಸೇನೆ (UBT) ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ.