ಬೆಂಗಳೂರು: ರಾಜ್ಯದಲ್ಲಿ ಹಲವೆಡೆ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾಗಿರುವ ಹಾನಿ ಬಗ್ಗೆ ಪ್ರತಿಪಕ್ಷ ಬಿಜೆಪಿಯ ಎರಡು ತಂಡಗಳು ಶನಿವಾರ ಹಾಗೂ ಭಾನುವಾರ ಖುದ್ದು ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಕ್ರಮಗಳಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಸಿದ್ಧವಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಸಚಿವರು ಹಾಗೂ ಶಾಸಕರನ್ನು ಒಳಗೊಂಡು ಎರಡು ತಂಡಗಳು ಪ್ರತ್ಯೇಕವಾಗಿ ಮಳೆ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಭಾರಿ ಮಳೆ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿಯ ಅಧ್ಯಯನ ಮಾಡಲಿದೆ.
ಅಲ್ಲದೆ, ಸಂತ್ರಸ್ತರು ಹಾಗೂ ಮಳೆಯಿಂದ ಬಾಧಿತ ರೈತರ ಜತೆಗೆ ಚರ್ಚಿಸಲಿದೆ. ಸರ್ಕಾರ ಕೈಗೊಂಡ ತುರ್ತು ಪರಿಹಾರ ಕ್ರಮಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಿದೆ. ಅಧ್ಯಯನ ಮತ್ತು ಸಂಗ್ರಹಿಸಿದ ಮಾಹಿತಿ ಕ್ರೋಡೀಕರಿಸಿ, ಯುದ್ಧೋಪಾದಿಯಲ್ಲಿ ಸಂತ್ರಸ್ತರಿಗೆ ಪರಿಹಾರ, ಮತ್ತಿತರ ನೆರವಿನ ಕಾರ್ಯ ಕೈಗೆತ್ತಿಕೊಳ್ಳಲು ಸರ್ಕಾರಕ್ಕೆ ಒತ್ತಾಯಿಸಲಿದೆ.