ಕುಶಾಲನಗರ : ಶಕ್ತಿಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಕುಶಾಲನಗರ ಬಿಜೆಪಿ ಕಾರ್ಯಕರ್ತರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ದೇಶದ್ರೋಹಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.
ಮಾಜಿ ಸಭಾಪತಿ ಕೆ.ಜಿ.ಬೋಪಯ್ಯ ಮಾತನಾಡಿ, ಶಕ್ತಿ ಕೇಂದ್ರದಲ್ಲೇ ನಿಂತು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಲು ಅವರಿಗೆ ಧೈರ್ಯ ನೀಡಿದವರು ಯಾರು? ಇಂದು ಪಾಕಿಸ್ತಾನ ಪರ ಘೋಷಣೆ ಕೂಗಿದವರು ನಾಳೆ ಅವರ ಧ್ವಜ ಹಾರಿಸುವ ಪ್ರಯತ್ನ ಮಾಡುತ್ತಾರೆ. ನುಡಿದಂತೆ ನಡೆವ ಸರ್ಕಾರ ನಮ್ಮದು ಎಂದು ಹೇಳಿಕೊಳ್ಳುವ ಕಾಂಗ್ರೆಸ್, ಮಂಗಳವಾರ ಗೃಹಸಚಿವ ಪರಮೇಶ್ವರ್ ಹೇಳಿದಂತೆ, ದೇಶ ದ್ರೋಹಿಗಳನ್ನು ಬಂಧಿಸುವ ಕೆಲಸ ತಕ್ಷಣ ಮಾಡಬೇಕು ಎಂದು ಆಗ್ರಹಿಸಿದರು.
ಮಂಡಲ ಅಧ್ಯಕ್ಷ ಗೌತಮ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಮಂಡಲ ಯುವ ಮೋರ್ಚಾ ಅಧ್ಯಕ್ಷ ಮೋಹಿತ್ ತಿಮ್ಮಯ್ಯ, ರಾಜ್ಯ ಎಸ್.ಟಿ. ಮೋರ್ಚಾ ಉಪಾಧ್ಯಕ್ಷೆ ಮಂಜುಳಾ, ಮಂಡಲ ಉಪಾಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಪ್ರಮುಖ ಜಿ.ಎಲ್.ನಾಗರಾಜ್, ಯುವ ಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಶೇಖರ್ ಹೇರೂರು, ನಗರ ಯುವ ಮೋರ್ಚಾ ಅಧ್ಯಕ್ಷ ಸುಮನ್, ಎಂ.ಎಂ.ಚರಣ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ದರ್ಶನ್ ಜೋಯಪ್ಪ, ಮೋಕ್ಷಿತ್ ರಾಜ್, ನವನಿತ್ ಪೊನ್ನಟ್ಟಿ, ರಾಮು, ಮಂಡಲ ಉಪಾಧ್ಯಕ್ಷ ಅಜೀಶ್, ಪ್ರವೀಣ್ ಇತರರು ಉಪಸ್ಥಿತರಿದ್ದರು.