ಬೆಂಗಳೂರು:
ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನ ಸರ್ವ ಸಜ್ಜುಗೊಳಿಸುವುದು ಮತ್ತು ಪಕ್ಷದ ಶಿಸ್ತು ಉಲ್ಲಂಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಕೂಡಲೇ ಕ್ರಮಕ್ಕಾಗಿ ಹೈಕಮಾಂಡ್ಗೆ ಒತ್ತಾಯಿಸಲು ಬಿಜೆಪಿ ಹಿರಿಯ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಪಕ್ಷದ ಕಚೇರಿಯಲ್ಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಮುಖಂಡರ ಸಭೆಯಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆಯಿಂದ 28 ಕ್ಷೇತ್ರಗಳಲ್ಲಿಯೂ ಜಯಗಳಿಸಲು ಒಗ್ಗಟ್ಟಿನ ಹೋರಾಟ ಮಾಡಬೇಕು ಎಂದು ನಿರ್ಣಯಿಸಲಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳನ್ನು ಪಡೆಯಲು ಬಿಜೆಪಿಗೆ ಸಾಧ್ಯವಾಗದೆ ಇರುವುದಕ್ಕೆ ನಾನಾ ಕಾರಣಗಳಿವೆ. ಅವುಗಳ ಬಗ್ಗೆಯೂ ಪರಾಮರ್ಶೆ ಮಾಡಿಕೊಂಡು ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎನ್ನುವ ಅಭಿಪ್ರಾಯಕ್ಕೆ ಸಭೆಸಹಮತ ನೀಡಿದೆ.
ಪಕ್ಷಕ್ಕೆ ಹಿರಿಯರು ಮುಖ್ಯ. ಕಿರಿಯರ ಉತ್ಸಾಹ, ಹಿರಿಯರ ಅನುಭವ ಸಮ್ಮಿಲನಗೊಂಡರೆ ಮಾತ್ರ ಸಂಘಟನೆಗೆ ಶಕ್ತಿ ಮತ್ತು ಹೊಸ ರೂಪ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬೂತ್ಮಟ್ಟದಿಂದ ರಾಜ್ಯಮಟ್ಟದ ತನಕ ವ್ಯವಸ್ಥಿತ ಪ್ರಯತ್ನ ಮಾಡಲು ನಿರ್ಧರಿಸಲಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ನಮ್ಮ ಹಂತದಲ್ಲಿ ಈ ಬಗ್ಗೆ ಸಾಧಕ ಬಾಧಕ ಚರ್ಚೆ ಬೇಡ. ಎರಡೂ ಪಕ್ಷಗಳು ಒಟ್ಟಾಗಿ ಎಲ್ಲಾ ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರಲು ಹೋರಾಟ ಮಾಡಲು ನಿರ್ಣಯಿಸಲಾಗಿದೆ.
ವಿಡಿಯೊ ಕ್ಲಪ್ಪಿಂಗ್ ಸಹಿತ ಶಿಾರಸ್ಸು
ಶಾಸಕ ಬಸನಗೌಡ ಯತ್ನಾಳ್ ಆಗಿಂದಾಗ್ಗೆ ನೀಡುತ್ತಿರುವ ಬಹಿರಂಗ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತರುತ್ತಿರುವುದು ಅಷ್ಟೆ ಅಲ್ಲ, ಸಂಘಟನೆಗೆ ಹಿನ್ನೆಡೆಯಾಗುತ್ತಿವೆ. ಈ ಬಗ್ಗೆ ತುರ್ತು ಕ್ರಮ ಆಗಲೇಬೇಕು ಎಂದು ಸಭೆಯಲ್ಲಿ ಪ್ರತಿಪಾದಿಸಲಾಗಿದೆ. ಯತ್ನಾಳ್ ವಿಷಯಕ್ಕೆ ಎಲ್ಲಾ ಸಭೆಯಲ್ಲಿ ಆದ್ಯತೆ ನೀಡಿದರೆ ಅವರಿಗೆ ದೊಡ್ಡ ಮನ್ನಣೆ ದೊರೆಯುತ್ತದೆ. ಈ ಬಗ್ಗೆ ಚರ್ಚೆ ಮಾಡುವುದು ಬೇಡ ಎನ್ನುವ ಅಭಿಪ್ರಾಯವೂ ಕೇಳಿಬಂದಿದೆ.
ಕೇಂದ್ರದ ನಾಯಕರು ಎಲ್ಲವನ್ನು ಗಮನಿಸುತ್ತಿದ್ದಾರೆ. ಅವರಿಗೆ ಗೊತ್ತಿಲ್ಲದ ಸಂಗತಿಗಳೇನಿಲ್ಲ. ಆದ್ದರಿಂದ ಯತ್ನಾಳ್ ಎಲ್ಲೆಲ್ಲಿ ಏನೇನು ಮಾತನಾಡಿದ್ದಾರೆ ಎನ್ನುವುದನ್ನು ಆಡಿಯೊ, ವಿಡಿಯೊ ಕ್ಲಿಪ್ಪಿಂಗ್ ಸಹಿತ ಹೈಕಮಾಂಡ್ಗೆ ಕಳುಹಿಸಿ ಕ್ರಮಕ್ಕೆ ಒತ್ತಾಯಿಸಲು ತೀರ್ಮಾನಿಸಲಾಗಿದೆ. ಯತ್ನಾಳ್ ಮೇಲೆ ಕೇಂದ್ರ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗೋಣ ಎನ್ನುವ ಸಹಮತಕ್ಕೂ ಸಭೆಯಲ್ಲಿ ಬರಲಾಗಿದೆ.
ಹೋರಾಟಕ್ಕೆ ತೀರ್ಮಾನ
ರಾಜ್ಯ ಸರ್ಕಾರದ ವೈಲ್ಯಗಳನ್ನು ಎತ್ತಿ ಹಿಡಿದು ಬೂತ್ ಮಟ್ಟದಿಂದ ರಾಜ್ಯ ಮಟ್ಟದ ತನಕ ಹೋರಾಟ ನಡೆಸುವುದು ಬಹಳ ಮುಖ್ಯ. ಆ ಮೂಲಕವೂ ಜನರ ಸಂಘಟನೆಗೆ ಮತ್ತು ಜಾಗೃತಿಗೆ ಆದ್ಯತೆ ನೀಡಬೇಕು ಎಂದು ನಿರ್ಣಯಿಸಲಾಗಿದೆ.
ಹಾಜರಿದ್ದವರು
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ಎಸ್.ಸದಾನಂದಗೌಡ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಮೇಲ್ಮನೆ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ಸಿ.ಟಿ.ರವಿ ಮತ್ತಿತರರು ಹಾಜರಿದ್ದರು.
ಕೇಂದ್ರ ಸಚಿವ ಪ್ರಹ್ಲಾದಜೋಷಿ, ನಿಕಟಪೂರ್ವ ಬಿಜೆಪಿ ಮಾಜಿ ಅಧ್ಯಕ್ಷರು ಸಭೆಗೆ ಗೈರಾಗಿದ್ದರು.