ಮುಂಬೈ: ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ನೆಲಕ್ಕುರುಳಿದ ಹಿನ್ನೆಲೆ ಬಿಜೆಪಿಗೆ ಆಡಳಿತಕ್ಕೆ ಅವಕಾಶ ಸಿಕ್ಕಿದೆ. ಸರ್ಕಾರ ಬೀಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿಯ ಮುಖಂಡ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಮಧ್ಯಪ್ರದೇಶದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ.
ತಮ್ಮನ್ನು ತಾವು ಮಾಮಾಜೀ ಎಂದು ಕರೆದುಕೊಂಡಿರುವ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಅನೇಕರ ಹೆಸರುಗಳು ಮುಖ್ಯಮಂತ್ರಿ ಪಟ್ಟಕ್ಕೆ ಕೇಳಿಬರುತ್ತಿವೆ. ಪ್ರಮುಖ ನಾಯಕ ಗೋಪಾಲ್ ಭಾರ್ಗವ್ ಕೂಡ ಸಿಎಂ ಪಟ್ಟದ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಥಾವರ್ಚಂದ್ ಗೆಹ್ಲೋಟ್, ಶಾಸಕಾಂಗ ಪಕ್ಷದ ಮುಖ್ಯ ವಿಪ್ ನರೋತ್ತಮ್ ಮಿಶ್ರಾ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಕೈಲಾಶ್ ವಿಜಯವರ್ಗಿಯಾ ಸೇರಿ ಅನೇಕರ ಹೆಸರುಗಳು ಸಿಎಂ ಪಟ್ಟಕ್ಕೆ ಕೇಳಿಬಂದಿವೆ. ಆದರೆ ಚೌಹಾಣ್ ಹೆಸರು ಬಹುತೇಕ ಖಚಿತವಾಗುವ ಸಾಧ್ಯತೆ ಇದೆ. ಹಾಗಾದರೆ ಚೌಹಾಣ್ ಅವರು ನಾಲ್ಕನೇ ಬಾರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾದಂತಾಗುತ್ತದೆ.
ಶಿವರಾಜ್ ಸಿಂಗ್ ಚೌಹಾಣ್ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಸೋಮವಾರದಂದು ಆರು ಜನರ ಶಾಸಕರ ತಂಡದೊಂದಿಗೆ ತಕ್ಷಣವೇ ವಿಶ್ವಾಸ ಮತಯಾಚನೆಯಾಗಬೇಕೆಂದು ಸ್ಪೀಕರ್ ಬಳಿ ಮನವಿ ಮಾಡಿದ್ದರು. ದಲಿತ ವರ್ಗಕ್ಕೆ ಸೇರಿದ್ದು ಎಲ್ಲಾ ವರ್ಗದ ಜನರಿಗೂ ಒಳಿತು ಮಾಡುವತ್ತ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಿದ್ದ ಚೌಹಾಣ್ ಮಹಿಳೆಯರು ಮತ್ತು ಯುವಕರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ರಾಜ್ಯದಲ್ಲಿ ಚೌಹಾಣ್ ಅವರ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗುವುದು ಎನ್ನಲಾಗಿದೆ.
ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗಾಗಿ ಇಂದು ಸಂಜೆ ಆರು ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿ ಇಂದು ಸಂಜೆಯೇ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)
ಪಾಕಿಸ್ತಾನದ ಈ ಕ್ರಿಕೆಟಿಗನಿಗೆ ವಿರಾಟ್ ಕೊಹ್ಲಿಯಂತಾಗುವುದು ಇಷ್ಟವಿಲ್ಲವಂತೆ!