More

    ನಮಗಿಂತ ಹೆಚ್ಚು ಬಿಜೆಪಿ, ದಳದವರೇ ಗ್ಯಾರಂಟಿ ಫಲಾನುಭವಿಗಳು; ಡಿಕೆಶಿ ಲೇವಡಿ

    ಬೆಂಗಳೂರು: ಕಾಂಗ್ರೆಸ್ ಬದುಕಿನ ಆಧಾರದ ಮೇಲೆ ರಾಜಕೀಯ ಮಾಡಿದರೆ, ಬಿಜೆಪಿ ಭಾವನೆಗಳ ಮೇಲೆ ಮಾಡುತ್ತದೆ. ನಮಗಿಂತ ಹೆಚ್ಚು ಬಿಜೆಪಿ, ದಳದವರೇ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
    ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಇಂದಿರಾ ಗಾಂಧಿ 39ನೇ ವರ್ಷದ ಪುಣ್ಯಸ್ಮರಣೆ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿಯವರು ಸಮಾಜ ಒಡೆಯುವ ಯೋಜನೆಗಳನ್ನು ಕೊಟ್ಟಿದ್ದಾರೆ. ತಮ್ಮ ಸ್ವಂತ ಹಣದಿಂದ ದೇಶಕ್ಕೆ 60-40 ಅಳತೆಯ ಒಂದೇ ಒಂದು ನಿವೇಶನವನ್ನೂ ನೀಡಿಲ್ಲ. ನೆಹರು ಅವರು ತಮ್ಮ ಮುಕ್ಕಾಲು ಪಾಲು ಆಸ್ತಿಯನ್ನೇ ಈ ದೇಶಕ್ಕೆ ಬರೆದರು ಎಂದು ಟೀಕಿಸಿದರು.
    ನಾವು ಸಮಾಜದ ಎಲ್ಲಾ ವರ್ಗದವರನ್ನು ಕೂಡಿಸಿ ಹೊಲಿಯುತ್ತೇವೆ, ಬಿಜೆಪಿಯವರು ಕತ್ತರಿಸುತ್ತಾರೆ. ಬಿಜೆಪಿಯವರದ್ದು ತಲೆಬುಡವಿಲ್ಲದ ಕಾನೂನುಗಳು, ನಾವು ಇಂಡಿಯಾ ಎಂದು ಹೆಸರಿಟ್ಟ ತಕ್ಷಣ ಇಂಡಿಯಾ ಎನ್ನುವ ಹೆಸರನ್ನೇ ಬದಲಾಯಿಸಲು ಹೊರಟಿದ್ದಾರೆ. ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವೀಸ್ ಸೇರಿದಂತೆ ನೋಟಿನಲ್ಲಿಯೂ ಹೆಸರು ಬದಲಾಯಿಸಲು ಬಿಜೆಪಿ ಹೊರಟಿರುವುದು ಹಾಸ್ಯಾಸ್ಪದ ಎಂದರು.
    ಮೇಕಿನ್ ಇಂಡಿಯಾ ಎಂದು ಹೆಸರಿಟ್ಟಿದ್ದೇ ಅವರು, ಅವರು ಮಾಡಿದ ಯೋಜನೆಯ ಹೆಸರನ್ನೇ ಬದಲಾಯಿಸಲು ಹೊರಟಿದ್ದಾರೆ. ಇಂಡಿಯಾ ಎನ್ನುವ ಹೆಸರು ಭಾವನಾತ್ಮಕವಾಗಿ ನಮ್ಮೊಳಗೆ ಹಾಸುಹೊಕ್ಕಾಗಿದೆ. ಈ ರೀತಿ ಭಾವನೆ ಕೆರಳಿಸುವ ಕೆಲಸಕ್ಕೆ ಬಿಜೆಪಿಯವರು ಕೈ ಹಾಕಿದ್ದಾರೆ, ನಾವು ಜನರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಕೈ ಹಾಕೋಣ ಎಂದು ಹೇಳಿದರು.
    ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್, ಉಚಿತ ಬಸ್ ಹೀಗೆ ಗ್ಯಾರಂಟಿ ಯೋಜನೆಗಳನ್ನು ಜಾತಿ, ಧರ್ಮದ ಆಧಾರದ ಮೇಲೆ ತಂದಿದ್ದೇವೆಯೇ? ಇಲ್ಲ. ನಮಗಿಂತ ಹೆಚ್ಚು ಬಿಜೆಪಿ, ದಳದವರೇ ಈ ಯೋಜನೆಗಳ ಫಲಾನುಭವಿಗಳು. ಮಂಗಳೂರು ಸೇರಿದಂತೆ ಅನೇಕ ಕಡೆ ಬಿಜೆಪಿಯವರೇ ಗ್ಯಾರಂಟಿ ಯೋಜನೆಗಳಿಗೆ ಮುಗಿಬಿದ್ದು, ಮೊದಲು ನೋಂದಣಿ ಮಾಡಿಕೊಳ್ಳುತ್ತಿದ್ದರು ಎಂದು ನಮ್ಮ ನಾಯಕರು ಹೇಳುತ್ತಿದ್ದರು. ನಮಗೆ ಮತಗಳು ಮಾತ್ರ ಇಲ್ಲ, ಆದರೆ ಯೋಜನೆಗಳು ಮಾತ್ರ ಬೇಕು. ಕರಾವಳಿಯ ಜನ ಮುಂದೊಂದು ದಿನ ಬದಲಾಗಬಹುದು ಎಂದು ಕಾದು ನೋಡೋಣ, ವಿಶ್ವಾಸವಿಟ್ಟು ನಡೆಯೋಣ ಎಂದು ಹೇಳಿದರು.
    ಮುಖ್ಯಮಂತ್ರಿ ಸಿದ್ದರಾಮಯ್ಯ, ಚಲುವರಾಯಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಚಂದ್ರಪ್ಪ, ನರೇಂದ್ರ ಸ್ವಾಮಿ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts