ಉಡುಪಿ: ಬಿಜೆಪಿ ಸರ್ಕಾರದ ಅವಧಿಯ ಸಾಧನೆಗಳನ್ನು ತನ್ನದೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತ, ಯಾವುದೇ ತತ್ವ ಸಿದ್ಧಾಂತವೂ ಇಲ್ಲದೆ ಅಧಿಕಾರದ ಲಾಲಸೆಯಿಂದ ಪಕ್ಷದಿಂದ ಪಕ್ಷಕ್ಕೆ ಹಾರಿದ್ದೇ ಜಯಪ್ರಕಾಶ್ ಹೆಗ್ಡೆ ಅವರ ಸಾಧನೆಯಾಗಿದೆ ಎಂದು ಕಾಪು ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಟೀಕಿಸಿದ್ದಾರೆ.
ಉಡುಪಿ ತಾಲೂಕಿನ ಹಿರಿಯಡ್ಕದ ದೇವಾಡಿಗರ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಹಿರಿಯಡ್ಕ ಮಹಾ ಶಕ್ತಿಕೇಂದ್ರ ವ್ಯಾಪ್ತಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಹಾಸ್ಯಾಸ್ಪದ ಸಂಗತಿ
ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಮಲ್ಪೆ ಬಂದರು ಮತ್ತು ಹೆಜಮಾಡಿ ಬಂದರು ಅಭಿವೃದ್ಧಿಯನ್ನು ತನ್ನ ಸಾಧನೆ ಎಂದು ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳಲು ಹೆಗ್ಡೆ ಯತ್ನಿಸುತ್ತಿರುವುದು ಹಾಸ್ಯಾಸ್ಪದ ಸಂಗತಿ. ಹಲವಾರು ವರ್ಷಗಳಿಂದ ಅವರು ಪ್ರತಿನಿಧಿಸಿದ್ದ ಕ್ಷೇತ್ರ ವ್ಯಾಪ್ತಿಯ ಹಂಗಾರಕಟ್ಟ ಮತ್ತು ಕೋಡಿ ಕನ್ಯಾನ ಬಂದರು ಅಭಿವೃದ್ಧಿಗೆ ಏನು ಕ್ರಮ ಕೈಗೊಂಡಿದ್ದಾರೆ ಎನ್ನುವುದನ್ನು ಜನತೆಯ ಮುಂದೆ ಬಹಿರಂಗಪಡಿಸಿ. ಈ ಹಿಂದೆ ಸಚಿವರಾಗಿದ್ದಾಗ ಮಲ್ಪೆ ಬಂದರಿನ ಬಳಿ ಮೀನುಗಾರಿಕೆಗೆ ಮೀಸಲಿಟ್ಟ ಜಾಗವನ್ನು ಒಳ ಒಪ್ಪಂದದ ಮೂಲಕ ಟೆಬ್ಮಾ ಶಿಪ್ ಯಾರ್ಡ್ ಕಂಪನಿಗೆ ನೀಡಿ ಅನ್ಯಾಯಯ ಮಾಡಿದ್ದನ್ನು ಮೀನುಗಾರರು ಇನ್ನೂ ಮರೆತಿಲ್ಲ ಎಂದರು.
ಸಭೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಪ್ರಮೋದ್ ಮಧ್ವರಾಜ್, ಕುಯಿಲಾಡಿ ಸುರೇಶ್ ನಾಯಕ್, ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ನಯನಾ ಗಣೇಶ್, ಶ್ಯಾಮಲಾ ಕುಂದರ್, ಜಿತೇಂದ್ರ ಶೆಟ್ಟಿ, ಶ್ರೀಕಾಂತ ನಾಯಕ್, ಜಿಯಾನಂದ ಹೆಗ್ಡೆ, ಜಯಂತಿ ಶೆಟ್ಟಿ ಹಾಗೂ ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೋಟ ಪೂಜಾರಿ ಗೆಲುವು ಶತಸಿದ್ಧ
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸರಳ ವ್ಯಕ್ತಿತ್ವದ ಹಾಗೂ ಅನುಭವಿ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭ್ಯರ್ಥಿಯನ್ನಾಗಿಸಿರುವುದು ಬಿಜೆಪಿಯ ಸಮಸ್ತ ಕಾರ್ಯಕರ್ತರಿಗೆ ಹೆಮ್ಮೆ ತಂದಿದೆ. ಹಿಂದುತ್ವ, ಅಭಿವೃದ್ಧಿ, ಹಾಗೂ ರಾಷ್ಟ್ರೀಯ ಚಿಂತನೆ ಆಧಾರಿತ ಈ ಚುನಾವಣೆಯಲ್ಲಿ ಕೋಟ ಗೆಲುವು ಶತಸಿದ್ಧ. ಎಲ್ಲ ಸಮಾಜ, ಜಾತಿ, ಸಮುದಾಯಗಳು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಪಣ ತೊಟ್ಟಿದ್ದಾರೆ. ಹೀಗಾಗಿ ಪೂಜಾರಿ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಲು ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಭಾರತ ದೇಶದ ಒಳಿತಿಗಾಗಿ, ಭದ್ರತೆ ಹಾಗೂ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರನ್ನೇ ಮತ್ತೊಮ್ಮೆ ಪ್ರಧಾನಿ ಮಾಡಬೇಕಿದೆ. ಈ ಬಾರಿ ದೇಶದಲ್ಲಿ ಬಿಜೆಪಿ 400 ಸ್ಥಾನ ಗೆಲ್ಲುವ ಗುರಿ ಹೊಂದಿದ್ದು, ನನ್ನನ್ನು ಬಹುಮತದೊಂದಿಗೆ ಗೆಲ್ಲಿಸಿ, ಗುರಿ ಸಾಧನೆಗೆ ಸಹಕರಿಸಬೇಕು.
ಕೋಟ ಶ್ರೀನಿವಾಸ ಪೂಜಾರಿ. ಬಿಜೆಪಿ ಅಭ್ಯರ್ಥಿ