ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡ ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು, ಹಲವು ಆರೋಪಗಳನ್ನು ಎಸಗಿದ್ದರು. ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ಅಶ್ವಥ್ ನಾರಾಯಣ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಚಾರ್ಜಿಂಗ್ ವೇಳೆ ಬ್ಯಾಟರಿ ಸ್ಕೂಟರ್ ಸ್ಫೋಟಗೊಂಡು ಸುಟ್ಟು ಭಸ್ಮವಾದ ಮನೆ; ಒಂದೇ ಕುಟುಂಬದ ನಾಲ್ವರೂ ಪವಾಡ ಸದೃಶ ರೀತಿಯಲ್ಲಿ ಪಾರು
“ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ಡಿಕೆಶಿ ಕಳಂಕ ತರುವುದು ಬೇಡ. ಬಿಲ್ ಮಾಡೋಕೆ ಯಾಕೆ ಎರಡೂವರೆ ತಿಂಗಳು ವಿಳಂಬ ಮಾಡಿದರು? ಇಷ್ಟು ದಿನ ಚೌಕಾಶಿ ಮಾಡುತ್ತಿದ್ದರಾ, ಗುತ್ತಿಗೆದಾರರ ಮೇಲಿನ ಆಪಾದನೆಗಿಂತ ಹೆಚ್ಚಿನ ಆಪಾದನೆ ಡಿಸಿಎಂ ಮೇಲಿದೆ. ಗುತ್ತಿಗೆದಾರರು ಅಜ್ಜಯ್ಯನ ಬಳಿ ಪ್ರಮಾಣ ಮಾಡಿ ಎಂದು ಹೇಳುತ್ತಿದ್ದಾರೆ. ಇವರು ಮಾಡಲ್ಲ ಅಂತಾ ಓಡಿ ಹೋಗ್ತಿದಾರೆ. ಪ್ರಾಮಾಣಿಕರಿದ್ರೆ ಲೋಕಾಯುಕ್ತ ತನಿಖೆ ಮಾಡಿಸಲಿ” ಎಂದು ಅಶ್ವಥ್ ನಾರಾಯಣ್ ಹೇಳಿದರು.
“ಇವರು ಮೊದಲು ತನಿಖೆ ಮಾಡಲಿ. ಆನಂತರ ರಾಜೀನಾಮೆಯಾದರು ಕೊಡಲಿ ಅಥವಾ ಏನಾದರೂ ಮಾಡಲಿ. ಈ ಪ್ರಕರಣವನ್ನು ಲೋಕಾಯುಕ್ತಕ್ಕೆ ಕೊಡಬೇಕು. ಡಿಸಿಎಂ ಮೇಲೆ ಬಂದಿರುವ ಆಪಾದನೆಯನ್ನು ಮೊದಲು ತನಿಖೆ ಮಾಡಿಸಿ ಮುಖ್ಯಮಂತ್ರಿಗಳೇ. ತನಿಖೆ ಮಾಡುವವರನ್ನು ನಾವೇನಾದರೂ ತಡೆದಿದ್ದೀವಾ?” ಎಂದು ಸಿಎಂ ಅನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಜಿಲ್ಲೆಯಲ್ಲಿ 21 ಕೂಸಿನ ಮನೆ ಪ್ರಾರಂಭ: ಜಿಪಂ ಉಪಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ ಮಾಹಿತಿ
“ನಿಮಗೆ ತಾಕತ್, ಧಮ್ ಇದ್ದರೆ ಅಜ್ಜಯ್ಯನ ಬಳಿ ಹೋಗಿ ಪ್ರಮಾಣ ಮಾಡಿ. ಡಿ.ಕೆ. ಶಿವಕುಮಾರ್, ಚಲುವರಾಯಸ್ವಾಮಿ ಮೇಲೆ ಲೋಕಾಯುಕ್ತ ತನಿಖೆ ಆಗಲೇಬೇಕು. ಡಿಸಿಎಂ ಅವರೇ ಭಯ ಪಡಬೇಡಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ವಿಪಕ್ಷ ಹೋರಾಟ ಮಾಡಲಿದೆ. ಯಡಿಯೂರಪ್ಪ, ಬೊಮ್ಮಾಯಿ, ಅಶೋಕ್ ಸೇರಿ ಎಲ್ಲರೂ ಇದ್ದಾರೆ. ಇವರ ನಾಯಕತ್ವದಲ್ಲಿ ಹೋರಾಟ ಮಾಡುತ್ತೇವೆ” ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿಗೆ ಮಾಜಿ ಸಚಿವ ಅಶ್ವಥ್ ನಾರಾಯಣ್ ನೇರ ಸವಾಲೆಸಗಿದ್ದಾರೆ.