ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರ್ ಬುಧವಾರ (ಜ. 22) ಜನ್ಮದಿನ ಆಚರಿಸಿಕೊಂಡಿದ್ದು ಮಾತ್ರವಲ್ಲದೆ ಈ ವರ್ಷವಿಡೀ ಸಿನಿಮಾದಲ್ಲಿ ಬಿಜಿಯಾಗಿರುವ ಮಾಹಿತಿ ಹಂಚಿಕೊಂಡಿದ್ದಾರೆ.
ಹುಟ್ಟುಹಬ್ಬದ ಪ್ರಯುಕ್ತ ನಿಖಿಲ್ಗೆ ಚಿತ್ರತಂಡ ಹಾಗೂ ಅಭಿಮಾನಿಗಳು ವಿಷ್ ಮಾಡಿದರೆ, ನಿಖಿಲ್ ‘ಧನುಷ್’ ಆಗಿ ಅಭಿಮಾನಿಗಳನ್ನು ಖುಷಿಗೊಳಿಸಿದ್ದಾರೆ. ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ನಿರ್ಮಾಪಕ ಮುನಿರತ್ನ, ತಮ್ಮ ನೂತನ ಚಿತ್ರ ‘ಧನುಷ್’ಗೆ ನಿಖಿಲ್ ಅವರನ್ನು ನಾಯಕನನ್ನಾಗಿ ಆರಿಸಿಕೊಂಡಿದ್ದು, ಬರ್ತ್ಡೇ ಸಂದರ್ಭದಲ್ಲೇ ಟೈಟಲ್ ಬಿಡುಗಡೆ ಆಗಿದೆ. ಈ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬ ಮಾಹಿತಿ ಬಹಿರಂಗಗೊಳ್ಳದಿದ್ದರೂ ‘ಐಪಿಎಸ್’ ಎಂಬ ಟ್ಯಾಗ್ಲೈನ್ ನಿಖಿಲ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಸುಳಿವನ್ನು ನೀಡಿದೆ.
ಮತ್ತೊಂದೆಡೆ ಎ.ಪಿ. ಅರ್ಜುನ್ ಅವರ ಮುಂದಿನ ಸಿನಿಮಾ ಹಾಗೂ ‘ಲೈಕಾ ಪ್ರೊಡಕ್ಷನ್ಸ್’ನ ನೂತನ ಚಿತ್ರದಲ್ಲೂ ನಿಖಿಲ್ ನಾಯಕರಾಗಿ ಕಾಣಿಸಲಿದ್ದಾರೆ. ಇನ್ನು ತೆಲುಗು ಚಿತ್ರ ನಿರ್ದೇಶಕ ವಿಜಯಕುಮಾರ್ ಕೊಂಡ ನಿಖಿಲ್ಗಾಗಿ ಸಿನಿಮಾ ನಿರ್ದೇಶಿಸಲಿರುವುದು ಈ ಹಿಂದೆಯೇ ಬಹಿರಂಗಗೊಂಡಿತ್ತು. ಇದೀಗ ಜನ್ಮದಿನದ ಸಂದರ್ಭದಲ್ಲಿ ನಾಲ್ಕೂ ಚಿತ್ರತಂಡಗಳು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿವೆ. ಈ ಮೂಲಕ 2020ರಲ್ಲಿ ನಿಖಿಲ್ ಸಿನಿಮಾಗಳಲ್ಲಿ ಬಿಜಿ ಆಗಲಿರುವುದು ಖಚಿತವಾಗಿದೆ. ತಮ್ಮ ನೆಚ್ಚಿನ ನಟ ಬ್ಯಾಕ್ ಟು ಬ್ಯಾಕ್ ನಾಲ್ಕು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿರುವುದರಿಂದ ಅವರ ಅಭಿಮಾನಿಗಳು ಕೂಡ ಖುಷಿಯಾಗಿದ್ದು, ಸಂಭ್ರಮ ವ್ಯಕ್ತಪಡಿಸಿದ್ದಾರೆ.