ಮಂಗಳೂರು: ತಮಿಳುನಾಡಿನ ಕೂನೂರು ಸಮೀಪ ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದ ಸಿಡಿಎಸ್ ಜ. ಬಿಪಿನ್ ರಾವತ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ಮೂವರ ವಿರುದ್ಧ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಸಂತ ಕುಮಾರ್ ಟಿ.ಕೆ.’ ಮತ್ತು ‘ಸುಬ್ಬರಾವ್ ರವಿಕುಮಾರ್’ ಫೇಸ್ಬುಕ್ ಖಾತೆಯಿಂದ ಜ. ಬಿಪಿನ್ ರಾವತ್ ಕುರಿತು ಹಾಗೂ ‘ಶ್ರೀನಿವಾಸ್ ಕಾರ್ಕಳ’ ಎಂಬ ಹೆಸರಿನ ಫೇಸ್ಬುಕ್ ಖಾತೆಯಿಂದ ಜ. ಬಿಪಿನ್ ರಾವತ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿದೆ. ಇದು ಜನಸಮುದಾಯಗಳ ನಡುವೆ ವೈಮನಸ್ಸು ಉಂಟು ಮಾಡುವ ಹಾಗೂ ಅಪಾಯ ಭೀತಿಯನ್ನು ಹುಟ್ಟಿಸುವ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.