ಬಣಕಲ್: ನೆಟ್ವರ್ಕ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಯಲ್ಲಿ ಬಯೊಮೆಟ್ರಿಕ್ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಾಳೂರು ದರ್ಬಾರ್ ಪೇಟೆ ನ್ಯಾಯಬೆಲೆ ಅಂಗಡಿಯು ಬಸ್ ತಂಗುದಾಣದಲ್ಲೇ ನಡೆಯುತ್ತಿದೆ.
ಬಾಳೂರು ದರ್ಬಾರ್ ಪೇಟೆಯಲ್ಲಿ ನ್ಯಾಯಬೆಲೆ ಅಂಗಡಿ ಇದ್ದರೂ ನೆಟ್ವರ್ಕ್ ಸಮಸ್ಯೆಯಿಂದ ಬಯೊಮೆಟ್ರಿಕ್ನಲ್ಲಿ ಬೆರಳಚ್ಚು ನೀಡಲು ಸಾಧ್ಯವಾಗುತ್ತಿಲ್ಲ. ನ್ಯಾಯಬೆಲೆ ಅಂಗಡಿಯಿಂದ 1 ಕಿಮೀ ದೂರದ ಬಾಸನಕೂಡಿಗೆ ಬಸ್ ತಂಗುದಾಣದಲ್ಲಿ ಬಯೊಮೆಟ್ರಿಕ್ನಲ್ಲಿ ಬೆರಳಚ್ಚು ನೀಡಿ ಪಡಿತರ ನೀಡಲಾಗುತ್ತಿದೆ.
ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಪಡಿತರ ವಿತರಣೆ ಮಾಡುವ ದಿನಗಳಂದು ಲ್ಯಾಪ್ಟಾಪ್ ಮತ್ತು ಬಯೊಮೆಟ್ರಿಕ್ ಯಂತ್ರವನ್ನು ಬಸ್ ತಂಗುದಾಣದಲ್ಲಿ ಕುಳಿತು ಪಡಿತರದಾರರ ಬೆರಳಚ್ಚು ಪಡೆದು ರೇಷನ್ ಕಾರ್ಡ್ನಲ್ಲಿ ನಮೂದಿಸಿ ಅಲ್ಲಿಂದ 1 ಕಿಮೀ ದೂರದ ದರ್ಬಾರ್ ಪೇಟೆಯಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ.
ಬಸ್ತಂಗುದಾಣದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದರಿಂದ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಆಗಾಗ ಲ್ಯಾಪ್ಟಾಪನ್ನು ಬೇರೆಡೆ ಚಾರ್ಜ್ ಮಾಡಿಕೊಂಡು ಬರಬೇಕಾಗಿದೆ. ನೆಟ್ವರ್ಕ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಹಾಗೂ ಪಡಿತರದಾರರು ಪರದಾಡುವಂತಾಗಿದೆ. ಬಾಳೂರು ಗ್ರಾಪಂ ಪ್ರದೇಶದಲ್ಲಿ ನೆಟ್ವರ್ಕ್ ಸಮರ್ಪಕವಾಗಿ ದೊರೆಯುತ್ತಿದ್ದು ಆ ಭಾಗದಲ್ಲಿ ನ್ಯಾಯಬೆಲೆ ಅಂಗಡಿ ತೆರೆದರೆ ಈ ಸಮಸ್ಯೆಗಳಿಗೆ ತೆರೆ ಎಳೆಯಬಹುದಾಗಿದೆ.