ಶಿವಪ್ರಭು ಈಸರಗೊಂಡ ಉಪ್ಪಿನಬೆಟಗೇರಿ
ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಅಕ್ಕಿ ವಿತರಿಸಲಾಗುತ್ತಿವೆ. ಆದರೆ, ಅಹಾರ ಧಾನ್ಯ ಪಡೆಯಲು ಪಡಿತರ ಚೀಟಿಯಲ್ಲಿರುವ ಕುಟುಂಬ ಸದಸ್ಯರಲ್ಲಿ ಯಾರಾದರೂ ಒಬ್ಬರು ವಿತರಣಾ ಕೇಂದ್ರಕ್ಕೆ ಹೋಗಿ ಬಯೋಮೆಟ್ರಿಕ್ ಕೊಡುವುದು ಕಡ್ಡಾಯವಾಗಿದೆ.
ಈಗ ಈ ಬಯೋಮೆಟ್ರಿಕ್ ವ್ಯವಸ್ಥೆಗೆ ಸರ್ವರ್ ಸಮಸ್ಯೆ ಕಾಡುತ್ತಿದೆ.
ಆರಂಭದಲ್ಲಿ ಈ ವ್ಯವಸ್ಥೆ ಉತ್ತಮ ಸೇವೆ ಒದಗಿಸುತ್ತ ಬಂದಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಬಯೋಮೆಟ್ರಿಕ್ ಯಂತ್ರದಲ್ಲಿ ಹೆಬ್ಬೆರಳಿನ ಗುರುತು ಪಡೆಯುತ್ತಿಲ್ಲ. ಹೀಗಾಗಿ, ಪಡಿತರ ಚೀಟಿಗಳಿಗೆ ಆಹಾರ ಧಾನ್ಯ ವಿತರಿಸುವುದು ಕಷ್ಟವಾಗುತ್ತಿದೆ.
ಉಪ್ಪಿನಬೆಟಗೇರಿ ಪಡಿತರ ಕೇಂದ್ರಕ್ಕೆ ಹನುಮನಕೊಪ್ಪ, ಹನುಮನಾಳ, ಸೈಬನಕೊಪ್ಪ ಮತ್ತು ಉಪ್ಪಿನಬೆಟಗೇರಿ ಸೇರಿ ಸುಮಾರು 2500ಕ್ಕೂ ಅಧಿಕ ಪಡಿತರ ಚೀಟಿಗಳಿವೆ.
ಪ್ರತಿ ತಿಂಗಳ 11 ತಾರೀಕಿನ ನಂತರ ಒಂದೊಂದು ವಾರ್ಡ್ಗಳಿಗೆ ಒಂದೊಂದು ದಿನ ನಿಗದಿ ಮಾಡಿ ವಿತರಣೆಗೆ ಡಂಗೂರ ಸಾರುತ್ತಾರೆ. ಆದರೆ, ಪಡಿತರ ಪಡೆಯಲು ನಸುಕಿನಲ್ಲೇ ಸರತಿ ಸಾಲಿನಲ್ಲಿ ನಿಲ್ಲುವ ಚೀಟಿದಾರರು ಕೊನೆಗೆ ಸರ್ವರ್ ಸಮಸ್ಯೆಯಿಂದಾಗಿ ಅಹಾರ ಧಾನ್ಯ ಪಡೆಯದೆ ಮರಳಿ ಮನೆಯತ್ತ ಹೆಜ್ಜೆ ಹಾಕಬೇಕಾಗಿದೆ.
ಇತ್ತ ತಾಂತ್ರಿಕ ದೋಷದಿಂದಾಗಿ ಪಡಿತರ ವಿತರಿಕರಿಗಂತೂ ದೊಡ್ಡ ತಲೆನೋವಾಗಿದೆ. ಹೀಗಾಗಿ ಮಹಿಳೆಯರು, ವೃದ್ಧರು ಸೇರಿ ಕೂಲಿ ಮಾಡುವವರು ದಿನವಿಡೀ ಕೆಲಸ ಬಿಟ್ಟು ಆಹಾರ ಧಾನ್ಯಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಗೋಳಾಡುವ ಸ್ಥಿತಿ ಎದುರಾಗಿದೆ. ಆದ್ದರಿಂದ ಸಂಬಂಧಿಸಿದ ಅಹಾರ ನಿರೀಕ್ಷಕರು ಕೂಡಲೇ ಸರ್ವರ್ ಸಮಸ್ಯೆಯನ್ನು ಸರಿಪಡಿಸಿ ಪರಿತರದಾರರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಪಡಿತರ ವಿತರಣೆಗೆ ಸಮಸ್ಯೆಯಾಗಿದೆ. ಇದು ರಾಜ್ಯಾದ್ಯಂತ ಆಗಿರುವ ಸಮಸ್ಯೆ. ಆದಷ್ಟು ಬೇಗ ಸರ್ವರ್ ಸಮಸ್ಯೆಯನ್ನು ಸರಿಡಿಸಲಾಗುವುದು. ಅಲ್ಲಿಯವರೆಗೆ ಪಡಿತರ ಚೀಟಿದಾರರು ಸಹಕರಿಸಬೇಕು.
— ವಿನಾಯಕ ದೀಕ್ಷಿತ ಆಹಾರ ನಿರೀಕ್ಷಕ, ಧಾರವಾಡ