ಬಣಕಲ್: ಸಬ್ಲಿ ಗ್ರಾಮದ ಎಲ್ಲ ಮನೆಗಳಿಗೆ ಈ ಹಿಂದೆ ಮೂಡಿಗೆರೆ ವಿಭಾಗದಿಂದ ವಿದ್ಯುತ್ ನೀಡಲಾಗುತ್ತಿತ್ತು. ಕೆಲ ತಿಂಗಳಿಂದ ಕಳಸ ವಿಭಾಗದಿಂದ ವಿದ್ಯುತ್ ಬಿಲ್ ನೀಡುತ್ತಿರುವುದನ್ನು ವಿರೋಧಿಸಿ ಸಬ್ಲಿ ಗ್ರಾಮಸ್ಥರು ಸೋಮವಾರ ಬಣಕಲ್ ಮೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ತಾಪಂ ಮಾಜಿ ಸದಸ್ಯ ಸಬ್ಲಿ ದೇವರಾಜ್ ಮಾತನಾಡಿ, ಕಳಸ ತಾಲೂಕು ಘೊಷಣೆಯಾದ ನಂತರ ಅಲ್ಲಿಗೆ ಈ ಭಾಗದ ಕೆಲ ಗ್ರಾಮಗಳು ಸೇರ್ಪಡೆಯಾಗಿದೆ. ಸಬ್ಲಿ ಗ್ರಾಮ ಮೂಡಿಗೆರೆ ತಾಲೂಕಿಗೆ ಸೇರಿದ್ದರೂ ಕೆಲ ತಿಂಗಳುಗಳಿಂದ ಕಳಸದ ವಿಭಾಗದಿಂದ ವಿದ್ಯುತ್ ಬಿಲ್ ನೀಡುತ್ತಿದ್ದು, ಬಿಲ್ ಪಾವತಿಸಲು ಕಳಸ ಅಥವಾ ಬಾಳೂರಿಗೆ ಹೋಗಬೇಕಾಗಿದೆ. ಇದರಿಂದ ಸಬ್ಲಿ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಈ ಹಿಂದೆ ಕಳಸ ವಿಭಾಗದಿಂದ ವಿದ್ಯುತ್ ಬಿಲ್ ನೀಡದಂತೆ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂಡಿಗೆರೆ ಮೆಸ್ಕಾಂ ಎಇಇ ಚಿದಾನಂದ್ ದೂರವಾಣಿ ಮೂಲಕ ಮಾತನಾಡಿ, ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಸಿ ಮೂಡಿಗೆರೆ ವಿಭಾಗದಿಂದ ವಿದ್ಯುತ್ ಬಿಲ್ ಬರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಗ್ರಾಮಸ್ಥರಾದ ಸುರೇಶ್, ಮಂಜುನಾಥ್, ರಮೇಶ್, ಯೋಗೀಶ್, ಹರೀಶ್, ಕಲ್ಲೇಶ್, ಗಜೇಂದ್ರ ಇತರರಿದ್ದರು.