ನೋಯ್ಡಾ: ಇಲ್ಲಿನ ಗಡಿ ಚೌಕಂಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಕಳ್ಳರಿಬ್ಬರು ಬೈಕ್ನಲ್ಲಿ ಹೋಗುತ್ತಿರುವಾಗ ವ್ಯಕ್ತಿಯ ಬಳಿ ವ್ಯಾಲೆಟ್ ಎಗರಿಸಿದ್ದರು. ವ್ಯಾಲೆಟ್ನಲ್ಲಿದ್ದ ಎಟಿಎಂ ಕಾರ್ಡ್ ಬಳಸಿ ಹಣ ಪಡೆಯಲು ಮುಂದಾದಾಗ ಪಿನ್ ನಂಬರ್ ಕೇಳಿತ್ತು. ಹಾಗಾಗಿ, ಪಿನ್ ನಂಬರ್ ಪಡೆದುಕೊಳ್ಳಲೆಂದು ವ್ಯಾಲೆಟ್ ಅನ್ನು ಕದ್ದ ಸ್ಥಳಕ್ಕೆ ಮರಳಿದಾಗ ಪೊಲೀಸರಿಗೆ ತಗ್ಲಾಕಿಕೊಂಡಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಸೆಂಟ್ರಲ್ ನೋಯ್ಡಾದ ಡಿಸಿಪಿ ಹರೀಶ್ ಚಂದರ್, ಆರೋಪಿಗಳು ಊಟ ಮಾಡಲೆಂದು ರೆಸ್ಟೋರೆಂಟ್ಗೆ ಬಂದಿದ್ದ ವ್ಯಕ್ತಿಯೊಬ್ಬನ ಬಳಿಯಿಂದ ಮೊಬೈಲ್ ಫೋನ್ ಮತ್ತು ವ್ಯಾಲೆಟ್ ಕದ್ದು ಪರಾರಿಯಾಗುತ್ತಿದ್ದರು. ಗನ್ ತೋರಿಸಿ ಅದನ್ನು ಕದ್ದಿದ್ದರು. ಆ ವ್ಯಾಲೆಟ್ನಲ್ಲಿ ಒಂದಷ್ಟು ನಗದು, ಡಿಎಲ್, ಆಧಾರ್ಕಾರ್ಡ್ ಮತ್ತು ಎಟಿಎಂ ಕಾರ್ಡ್ಗಳಿದ್ದವು. ಸ್ವಲ್ಪ ದೂರು ಸಾಗಿದ ಬಳಿಕ ಎಟಿಎಂ ಕಾರ್ಡ್ನ ಪಿನ್ ನಂಬರ್ ಪಡೆದುಕೊಳ್ಳಲೆಂದು ಅವರಿಬ್ಬರು ಮರಳಿ, ಅದನ್ನು ಪಡೆದುಕೊಂಡು ಮತ್ತೆ ಪರಾರಿಯಾಗಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಾನಸಿಕ ಕಿರುಕುಳ ಆರೋಪ, ಪತಿ ವಿರುದ್ಧ ಪತ್ನಿ ದೂರು
ವ್ಯಾಲೆಟ್ ಮತ್ತು ಮೊಬೈಲ್ ಕಳೆದುಕೊಂಡಿದ್ದ ವ್ಯಕ್ತಿ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದ. ಕೂಡಲೇ ಇಡೀ ಪ್ರದೇಶದಲ್ಲಿ ನಾಕಾಬಂದಿ ಏರ್ಪಡಿಸಿ, ತಪಾಸಣೆಯನ್ನು ತೀವ್ರಗೊಳಿಸಲಾಗಿತ್ತು. ನಾಕಾಬಂದಿಯ ಬಳಿ ಬಂದ ಅವರಿಬ್ಬರೂ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ತಕ್ಷಣವೇ ಪೊಲೀಸ್ ಸಿಬ್ಬಂದಿ ಅವರನ್ನು ಬೆನ್ನಟ್ಟಿದ್ದರು. ಪೊಲೀಸರು ಪ್ರತಿದಾಳಿ ಮಾಡಿದಾಗ ಗುಂಡು ತಗುಲಿ ಗಾಯಗೊಂಡ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಹೇಳಿದ್ದಾರೆ.
ಸ್ಥಳೀಯ ನಿವಾಸಿಗಳಾದ ಗೌರವ್ ಸಿಂಗ್ (25) ಮತ್ತು ಸದಾನಂದ (25) ಬಂಧಿತರು. ಅವರು ಕದ್ದಿದ್ದ 3,200 ರೂ. ನಗದು ಇದ್ದ ವ್ಯಾಲೆಟ್ ಮತ್ತು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜತೆಗೆ ಅವರ ಬಳಿಯಿದ್ದ ಎರಡು ನಾಡಪಿಸ್ತೂಲ್ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.