ಜೈಪುರ: ಇತ್ತೀಚೆಗಷ್ಟೇ ರಾಜಸ್ಥಾನದ ಮಾನ್ಘರ್ ರಾಷ್ಟ್ರೀಯ ಸ್ಮಾರಕವನ್ನು ಮೋದಿ ಉದ್ಘಾಟಿಸಿದ್ದರು. ಅದೇ ವೇದಿಕೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ಗೆಹ್ಲೋಟ್ಗೂ ಸ್ಥಾನವಿತ್ತು. ಇದು ರಾಷ್ಟ್ರ ರಾಜಕಾರಣದಲ್ಲಿ ವಿಶೇಷ ಘಟನೆ ಆಗಿತ್ತು.
ಈ ವಿಷಯದ ಬಗ್ಗೆ ಮಾತನಾಡಿದ ಸಚಿನ್ ಪೈಲೆಟ್, ‘ಇದು ಒಂದು ಕುತೂಹಲಕಾರಿ ಘಟನೆ. ಈ ಹಿಂದೆ ಮೋದಿ, ಸದನದಲ್ಲಿ ಗುಲಾಂ ನಬಿ ಆಝಾದ್ರನ್ನು ಹೊಗಳಿದ್ದರು. ಅದಾದ ಮೇಲೆ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಮೋದಿಯ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದಿದ್ದಾರೆ.
ಈ ಹಿಂದೆ ರಾಜ್ಯಸಭೆಯಲ್ಲಿ ಸಂಸದ ಗುಲಾಂ ನಬಿ ಆಝಾದ್ರನ್ನು ಅವರ ಅವಧಿಯ ಕೊನೆಯ ದಿನದಂದು ಮೋದಿ ಹೊಗಳಿದ್ದರು. ಅದಾದ ಸ್ವಲ್ಪ ಸಮಯದಲ್ಲಿ ಆಝಾದ್, ಕಾಂಗ್ರೆಸ್ ಬಿಟ್ಟು ಹೊಸ ಪಕ್ಷ ಘೋಷಿಸಿದ್ದರು. ಈಗ ಗೆಹ್ಲೋಟ್ ಕಾಂಗ್ರೆಸ್ ಬಿಡಲಿದ್ದಾರಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಮಾನ್ಘರ್ ಕಾರ್ಯಕ್ರಮದಲ್ಲಿ ರಾಜಸ್ಥಾನ ಸಿಎಂ ಮತ್ತು ಪ್ರಧಾನಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಗೆಹ್ಲೋಟ್ರ ಕುರಿತು ‘ನಾನು ಮತ್ತು ಅಶೋಕ್ ಜಿ ಮುಖ್ಯಮಂತ್ರಿಗಳಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಇವರು ನುರಿತ ರಾಜಕಾರಣಿ ಆಗಿದ್ದು ಇಡೀ ವೇದಿಕೆಯಲ್ಲಿ ಅತ್ಯಂತ ಹಿರಿಯ ವ್ಯಕ್ತಿ’ ಎಂದು ಹೇಳಿದ್ದರು.
ಗೆಹ್ಲೋಟ್ ಹಿಂದೆ ‘ನಮ್ಮ ಪ್ರಧಾನಿ ವಿದೇಶಕ್ಕೆ ಹೋದಾಗ ಅವರಿಗೆ ಉತ್ತಮ ಸ್ಥಾನಮಾನ ಸಿಗುತ್ತಿದೆ. ಏಕೆಂದರೆ ಅವರು ಪ್ರಜಾಪ್ರಭುತ್ವ ಆಳವಾಗಿ ಬೇರೂರಿರುವ, ಗಾಂಧಿ ಹುಟ್ಟಿದ ದೇಶದ ಪ್ರಧಾನಿಯಾಗಿದ್ದಾರೆ. ಜಗತ್ತು, ಆ ದೇಶದ ಪ್ರಧಾನಿ ತಮ್ಮ ಬಳಿಗೆ ಬರುತ್ತಿದ್ದಾರೆ ಎಂದು ಹೆಮ್ಮೆಪಡುತ್ತೆ’ ಎಂದಿದ್ದರು. (ಏಜೆನ್ಸೀಸ್)