ಶ್ರೀನಿವಾಸಪುರ: ತಾಡಿಗೋಳ್ ಕ್ರಾಸ್ನಿಂದ ಕೋಲಾರದ ಟೋಲ್ವರೆಗೂ ಚತುಷ್ಪಥ ರಸ್ತೆ ನಿಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದ್ದು, ಬೆಳೆಗಳನ್ನು ಮಾರುಕಟ್ಟೆಗಳಿಗೆ ಸುಲಭವಾಗಿ ಮತ್ತು ಸುಗಮವಾಗಿ ತಲುಪಿಸಲು ನೆರವಾಗುತ್ತದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಭರವಸೆ ನೀಡಿದರು.
ತಾಲೂಕಿನ ಚಲ್ದಿಗಾನಹಳ್ಳಿ ಕ್ರಾಸ್ ಸಮೀಪ ಲೋಕೋಪಯೋಗಿ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ರಸ್ತೆ ಕಾಮಾಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನ ವಳಗೇರನಹಳ್ಳಿ, ಪುಂಗನೂರು ಕ್ರಾಸ್ ಜಂಕ್ಷನ್ ಅಭಿವೃದ್ಧಿಗೆ 2.5 ಕೋಟಿ ರೂ. ಮತ್ತು ಚಲ್ದಿಗಾನಹಳ್ಳಿ-ಹೊಸಹಳ್ಳಿಗೇಟ್ವರೆಗೂ 3 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ವಾಹನ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ಪ್ರಮುಖ ವೃತ್ತಗಳಾದ ವಳಗೇರನಹಳ್ಳಿ, ಪುಂಗನೂರು ಕ್ರಾಸ್ ಅಭಿವೃದ್ಧಿಪಡಿಸಲು ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ದಳಸನೂರು, ತಾಡಿಗೋಳ್ ಕ್ರಾಸ್, ನೀಲಟೂರ್ ಕ್ರಾಸ್ ಸೇರಿ ಅಗತ್ಯ ಇರುವ ಭಾಗಗಳಲ್ಲಿ ನಿಲ್ದಾಣ ವೃತ್ತಗಳನ್ನು ವಿಸ್ತಾರ ಮಾಡಲಾಗುತ್ತದೆ. ಈ ರಸ್ತೆಯಲ್ಲಿ ಚಲ್ದಿಗಾನಹಳ್ಳಿಯಿಂದ ಹೆಚ್ಚು ತಿರುವು ಇರುವುದರಿಂದ ಅಪಘಾತ ಸಂಭವಿಸುತ್ತಿದೆ. ಕಾಮಗಾರಿ ನಡೆಯುವಾಗ ಅಧಿಕಾರಿಗಳು ಗಮನ ಹರಿಸಿ ಗುಣಮಟ್ಟ ಕಾಪಾಡಬೇಕು ಎಂದರು.
ಎಂಎಲ್ಸಿ ಅನಿಲ್ ಕುಮಾರ್, ಕೋಚಿಮುಲ್ ನಿರ್ದೇಶಕ ಹನುಮೇಶ್, ವೇಣು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಬ್ಯಾಟಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಎಂ.ಶ್ರೀನಿವಾಸನ್, ಸಂಜಯ್ರೆಡ್ಡಿ, ವೆಂಕಟರಾಮೇಗೌಡ, ಶಿವಪ್ರಾಸಾದ್, ಗ್ರಾಪಂ ಅಧ್ಯಕ್ಷೆ ಸರಸ್ವತಮ್ಮ, ಸಹಾಯಕ ಅಭಿಯಂತರ ಹುಸೇನ್ ಸಾಬ್, ಸಹಾಯಕ ಇಂಜನಿಯರ್ ಎಲ್.ನಾಗರಾಜ್, ಗೋವಿಂದಪ್ಪ, ಗುತ್ತಿಗೆದಾರ ತಿಮ್ಮರಾಯಗೌಡ, ಜನಪ್ಪನಹಳ್ಳಿ ನವೀನ್ ಕುಮಾರ್ ಇದ್ದರು.