ಮೈಸೂರು: ಸಾಂಸ್ಕೃತಿಕ ನಗರಿಯ 8 ವರ್ಷದ ಬಾಲಕಿ ‘ಭರತನಾಟ್ಯ ರಂಗಪ್ರವೇಶ’ ಮಾಡಲು ಅಣಿಯಾಗಿದ್ದಾಳೆ. ಅಂತಾರಾಷ್ಟ್ರೀಯ ನೃತ್ಯ ಕಲಾವಿದ ದಂಪತಿ ಬದರಿ ದಿವ್ಯಾಭೂಷಣ್ ಮತ್ತು ಡಾ.ಅಂಜನಾಭೂಷಣ್ ಅವರ ಶಿಷ್ಯೆ ಕುಮಾರಿ ಚಿನ್ಮಯಿ ಆಚಾರ್ಯ ರಂಗ ಪ್ರವೇಶಕ್ಕೆ ಸಿದ್ಧಳಾಗಿದ್ದಾಳೆ.
ಭೂಷಣ್ ಪ್ರದರ್ಶಕ ಕಲೆಗಳು ಮತ್ತು ದೃಶ್ಯ ಪ್ರಸ್ತುತಿ ಕೇಂದ್ರವು ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಫೆ.10 ರಂದು ಸಂಜೆ 6ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಂಗ ಪ್ರವೇಶಿಸಲಿದ್ದಾರೆ.
ಈ ಬಾಲ ಪ್ರತಿಭೆ, ಕಾರ್ಯಕ್ರಮದ ಸತತ ಒಂದೂವರೆ ಗಂಟೆ ಕಾಲ ನಾನಾ ನೃತ್ಯಬಂಧಗಳನ್ನು ಪ್ರಸ್ತುತಪಡಿಸುತ್ತಿರುವುದು ವಿಶೇಷವಾಗಿದೆ.
ಚಿನ್ಮಯಿ ಆಚಾರ್ಯ, ಸರಸ್ವತಿಪುರಂನ ಜೆಎಸ್ಎಸ್ ಪಬ್ಲಿಕ್ ಸ್ಕೂಲ್ನಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈಕೆಯ ತಾಯಿ ಪವಿತ್ರಾ ಮೈಸೂರು ವಿವಿ ಸಂಶೋಧಕಿಯಾಗಿದ್ದಾರೆ. ಒಂದೇ ವರ್ಷದ ಅವಧಿಯಲ್ಲಿ ಭರತನಾಟ್ಯದ ಸಂಪೂರ್ಣ ಮಾರ್ಗವನ್ನು ಕಲಿತು, ಚಿನ್ಮಯಿ ಈಗ ಮೈಸೂರು ಜನತೆಗೆ ಕಲೆಯ ರಸದೌತಣ ನೀಡಲು ಸಜ್ಜಾಗಿ ನಿಂತಿದ್ದಾಳೆ. ಸಾಮಾನ್ಯವಾಗಿ ಈ ರೀತಿಯ ಕಲಿಕೆ ಸಾಕಷ್ಟು ಕ್ಲಿಷ್ಟ ಮತ್ತು ಕಠಿಣ. ಕೆಲವೇ ಗುರುಗಳು ಈ ಸಂಪ್ರದಾಯವನ್ನು ಪಾಲಿಸುತ್ತಾರೆ. ಈ ನಿಟ್ಟಿನಲ್ಲಿ ಭೂಷಣ ದಂಪತಿಯ ಶ್ರಮ ಶ್ಲಾಘನೀಯ.