ಚಿತ್ರದುರ್ಗ: ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಆಡುವ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ ಎಂದು ಸಚಿವ ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಆಗಿರುವ ಆರ್ಕಾವತಿ ಹಗರಣವನ್ನು ಸಿಎಂ ಬಯಲು ಮಾಡಿದ್ದಾರೆ. ಇದನ್ನು ಮುಚ್ಚಿ ಹಾಕಲು ಸಿದ್ದರಾಮಯ್ಯ ಲೋಕಾಯುಕ್ತವವನ್ನೇ ಮುಚ್ಚಿಸಿದರು. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಕೂಸು. ಅವರ ಅವಧಿಯಲ್ಲಾದ ವಿವಿಧ ಹಗರಣಗಳ ತನಿಖೆಗೆ ಸರ್ಕಾರ ಆದೇಶಿಸಿದೆ ಎಂದರು.
ಸಿದ್ದರಾಮಯ್ಯ ಬಹಳ ದೊಡ್ಡವರೆಂದು ವ್ಯಂಗ್ಯವಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧದ ಟೀಕೆಗೆ ಪ್ರತಿಕ್ರಿಯಿಸಿದರು.
ಪುಕ್ಕಟೆ ಕಾರ್ಡ್ ವಿತರಿಸುವುದು ದೊಡ್ಡದಲ್ಲವೆಂದು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಟೀಕಿಸಿದ ಸಚಿವರು, ನುಡಿದಂತೆ ನಡೆಯಲು ಕಾಂಗ್ರೆಸ್ಸಿಗೆ ಸಾಧ್ಯವಾಗದು ಎಂದರು.
*ಸ್ವಾಮೀಜಿಗಳು ಚುನಾವಣೆಗೆ ಸ್ಪರ್ಧಿಸಲಿ
ಕೆಲವು ಸ್ವಾಮೀಜಿಗಳು ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ. ಈ ವಿಷಯದಲ್ಲಿ ನಾವು ಚಿಂತಿಸುವುದಿಲ್ಲ. ಕಾಂಗ್ರೆಸ್ ಪರ ಬ್ಯಾಟಿಂಗ್ ಯಾಕೆ? ಬೌಲಿಂಗ್ ಕೂಡ ಮಾಡಲಿ ಅಥವಾ ಅವರೇ ನೇರ ಚುನಾವಣೆಗೆ ಸ್ಪರ್ಧಿಸಲಿ. ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಬಿಜೆಪಿ ಸರ್ಕಾರದ ಕೆಲಸ ನೋಡಿ ಮತ ಕೊಡುವಂತೆ ಜನರಲ್ಲಿ ಮನವಿ ಮಾಡುವದರತ್ತ ನಮ್ಮ ಗಮನ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಮಗ್ಶಾಟ್ (ಬಿ.ಸಿ.ಪಾಟೀಲ್)