ಯಲ್ಲಾಪುರ: ಗೀತಾ ಜಯಂತಿ ಪ್ರಯುಕ್ತ ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಭಗವದ್ಗೀತಾ ಅಭಿಯಾನ ನ. 21ರಿಂದ ಡಿ. 21 ರವರೆಗೆ 4 ಹಂತಗಳಲ್ಲಿ ನಡೆಯಲಿದೆ. ತಾಲೂಕಿನಲ್ಲಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ತೀರ್ವನಿಸಲಾಗಿದೆ ಎಂದು ಅಭಿಯಾನ ಸಮಿತಿಯ ಪ್ರಮುಖ ಡಾ. ಶಂಕರ ಭಟ್ಟ ಬಾಲೀಗದ್ದೆ ಹೇಳಿದರು.
ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಭಾನುವಾರ ಕರೆಯಲಾಗಿದ್ದ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ವಿವಿಧ ಭಾಗಗಳಲ್ಲಿ 10ನೇ ಅಧ್ಯಾಯದ ಪಠಣ, ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳಿಗಾಗಿ ಕಂಠಪಾಠ, ಭಾಷಣ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.
ಸಿದ್ದಿ, ಕುಣಬಿ, ಮರಾಠಿ ಜನಾಂಗದವರಿಗಾಗಿ ಭಗವದ್ಗೀತಾ ಅಭಿಯಾನ ಕೇಂದ್ರಗಳನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ. ಮಠದ 9 ಸೀಮೆ ವ್ಯಾಪ್ತಿಯಲ್ಲಿ ಕಳೆದ ವರ್ಷ 200ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಯಶಸ್ವಿ ಅಭಿಯಾನ ನಡೆದಿತ್ತು. ಈ ವರ್ಷವೂ ಅದೇ ರೀತಿ ನಡೆಯಲಿದೆ. ಅಭಿಯಾನ ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಬೇಕು ಎಂದರು.
ಜಿಲ್ಲಾ ಸಮಿತಿಯ ಪ್ರಮುಖರಾದ ಕೆ.ಜಿ. ಬೋಡೆ, ಡಿ.ಎನ್. ಗಾಂವ್ಕರ, ಕೇಂದ್ರ ಮಾತೃಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ, ಉಪಾಧ್ಯಕ್ಷೆ ರಮಾ ದೀಕ್ಷಿತ್, ಗಂಗಾ ಭಟ್ಟ ಇದ್ದರು.