ನವದೆಹಲಿ : ಪಂಚರಾಜ್ಯಗಳಲ್ಲಿ ಇಂದು ಮತ ಎಣಿಕೆ ನಡೆಯುತ್ತಿದ್ದು, ಸಂಜೆಯ ವೇಳೆಗೆ ಪೂರ್ಣ ಫಲಿತಾಂಶ ಹೊರಬರಲಿದೆ. ದೇಶದಲ್ಲಿರುವ ಕರೊನಾ ವಿಷಮ ಸ್ಥಿತಿಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಿದೆ. ಆದಾಗ್ಯೂ ಮತ ಎಣಿಕೆ ಪೂರ್ಣಗೊಳ್ಳುವ ಮುಂಚೆಯೇ ತಮ್ಮ ಪಕ್ಷ ಮುನ್ನಡೆ ಸಾಧಿಸುತ್ತಿದೆ ಎಂದು ಹಲವಾರು ರಾಜಕೀಯ ಕಾರ್ಯಕರ್ತರು ಬೀದಿಯಲ್ಲಿ ಗುಂಪು ಸೇರಿ ಸಂಭ್ರಮ ಆಚರಿಸಲು ಆರಂಭಿಸಿಬಿಟ್ಟಿದ್ದಾರೆ.
ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೆರಿಯ ಮುಖ್ಯ ಕಾರ್ಯದರ್ಶಿಗಳಿಗೆ ಅಂತಹ ಪ್ರಸಂಗಗಳು ನಡೆದರೆ ಸಂಬಂಧಿತರ ಮೇಲೆ ಎಫ್.ಐ.ಆರ್. ದಾಖಲಿಸಬೇಕೆಂದು ನಿರ್ದೇಶನ ನೀಡಿದೆ. ಆಯೋಗ ಈ ಮುಂಚೆ ಗುಂಪು ಸೇರದಂತೆ ನೀಡಿರುವ ಆದೇಶವನ್ನು ಜನರು ಪಾಲಿಸುವಂತೆ ನೋಡಿಕೊಳ್ಳಲಾಗದ ಸಂಬಂಧಿತ ಪೊಲೀಸ್ ಠಾಣಾಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು ಎಂದೂ ಸೂಚಿಸಿದೆ.
ಇದನ್ನೂ ಓದಿ: ಕೇರಳದ ತ್ರಿಸ್ಸೂರ್ನಲ್ಲಿ ಬಿಜೆಪಿಯ ಸುರೇಶ್ ಗೋಪಿ ಮುನ್ನಡೆ
ಈ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಎಂಕೆ ನಾಯಕ ಟಿಕೆಎಸ್ ಎಲಂಗೊವನ್, “ಕಾರ್ಯಕರ್ತರು ಸರಳವಾಗಿ ಖುಷಿಪಡುತ್ತಾರೆ. ಚುನಾವಣಾ ಆಯೋಗವು ಯಾವುದೇ ಉಲ್ಲಂಘನೆಯನ್ನು ಗಂಭೀರವಾಗಿ ಗಮನಿಸುತ್ತಿರುವುದರಿಂದ ಕಾರ್ಯಕರ್ತರು ತಮ್ಮ ಮನೆಗಳಿಂದಲೇ ಆಚರಿಸಬೇಕೆಂಬುದು ನಮ್ಮ ನಾಯಕರ ಸಲಹೆಯಾಗಿದೆ. ನಾವು ಜವಾಬ್ದಾರಿಯುತ ರಾಜಕೀಯ ಪಕ್ಷ” ಎಂದಿದ್ದಾರೆ. (ಏಜೆನ್ಸೀಸ್)
VIDEO | ಡಿಎಂಕೆ ಪಕ್ಷಕ್ಕೆ ಮುನ್ನಡೆ : ಬೀದಿಗಿಳಿದು ಸಂಭ್ರಮ ಆಚರಿಸಿದ ಬೆಂಬಲಿಗರು