ಗದಗ: ಕೋವಿಡ್ನಂತಹ ರೂಪಾಂತರಿ ತಳಿಯ ಸೋಂಕು ಪಸರಿಸುವ ಮುನ್ನ ನಾವು ಆತಂಕಪಡದೇ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ರಕ್ತತಪಾಸಿಗ ಡಾ.ದತ್ತಾತ್ರೇಯ ವೈಕುಂಠೆ ಅಭಿಪ್ರಾಯಪಟ್ಟರು.
ಅವರು ಬೆಟಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಕ.ಗಂ.ಮ ಶಾಲೆ ನಂ. ೨ ಹಾಗೂ ಶಾಲೆ ನಂ. ೫ ರ ಶಾಲಾ ಮಕ್ಕಳಿಗೆ ಉಚಿತ ರಕ್ತ ಗುಂಪು ಪರೀಕ್ಷಿಸಿ ಕಾರ್ಡ ವಿತರಿಸಿ ಮಾತನಾಡಿದರು. ಸೋಂಕು ಪಸರಿಸದಂತೆ ನಾವೆಲ್ಲರೂ ಈಗಿನಿಂದಲೇ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ ಎಂದರು.
ಎಲ್ಲ ಮಕ್ಕಳಿಗೆ ತಮ್ಮ ತಮ್ಮ ರಕ್ತದ ಗುಂಪಿನ ಬಗ್ಗೆ ಮಾಹಿತಿ ಇರಬೇಕು. ರಾಜ್ಯ ಸರಕಾರವು ಎಲ್ಲ ಶಾಲಾ ಮಕ್ಕಳ ರಕ್ತದ ಗುಂಪನ್ನು ಕಡ್ಡಾಯವಾಗಿ ದಾಖಲಿಸುವಂತೆ ಸೂಚಿಸಿದ್ದು ಸ್ವಾಗತಾರ್ಹ ಎಂದರು.
ವಿದ್ಯಾರ್ಥಿಗಳು ಪರಿಸರ ಸ್ವಚ್ಚತೆ, ವೈಯುಕ್ತಿಕ ಸ್ವಚ್ಚತೆಗೆ ಹೆಚ್ಚು ಮಹತ್ವ ನೀಡಬೇಕು. ಕೈ ಕಾಲು ಸ್ವಚ್ಛವಾಗಿಟ್ಟುಕೊಳ್ಳುವದು, ಪೌಷ್ಠಿಕ ಆಹಾರ ಸೇವಿಸುವ ಮೂಲಕ ಆರೋಗ್ಯದಿಂದ ಸದೃಢರಾಗಿರಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಎಸ್.ಎಸ್.ಪಿಳ್ಳೆ ಅವರು ಮಾತನಾಡಿ ರಕ್ತತಪಾಸಿಗರಾದ ಡಾ.ದತ್ತಾತ್ರೇಯ ವೈಕುಂಠೆ ಅವರು ಈಗಾಗಲೇ ಗದಗ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಶಾಲಾ ಮಕ್ಕಳ ರಕ್ತಗುಂಪಿನ ಪರೀಕ್ಷೆಯನ್ನು ಉಚಿತವಾಗಿ ಮಾಡಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಉಚಿತವಾಗಿ ರಕ್ತದಗುಂಪು ಪರೀಕ್ಷಿಸಿ ಚೀಟಿ ನೀಡುತ್ತಿರುವದು ಅಭಿನಂದನೀಯ ಅವರ ಸಾಮಾಜಿಕ ಕಳಕಳಿ ಮೆಚ್ಚುವಂತದ್ದು ಎಂದರು.
ಶಿಬಿರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕ ಶಿಕ್ಷಕರಿಯರು ಹಾಗೂ ಅಡುಗೆಯವರು ಸೇರಿ ಸುಮಾರು ೧೫೦ ಹೆಚ್ಚು ಜನರಿಗೆ ರಕ್ತಗುಂಪು ಪರೀಕ್ಷಿಸಿ ಚೀಟಿ ವಿತರಿಸಲಾಯಿತು.
ಮುಖ್ಯೋಪಾಧ್ಯಾಯ ಐ.ಎಂ.ರಾಜೇಖಾನ್ ಸ್ವಾಗತಿಸಿದರು ಪಿ.ಸಿ.ಕನಾಜ ನಿರೂಪಿಸಿದರು, ವ್ಹಿ.ಎನ್.ವನಕಿ ಪರಿಚಯಿಸಿದರು ಸುರೇಖಾ ತೊಂಡಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು ಕೊನೆಗೆ ಎಸ್.ಟಿ.ಕಾಜಾನವರ ವಂದಿಸಿದರು.