ಬೆಂಗಳೂರು: ಇದು ಬೆಂಗಳೂರು ಪೊಲೀಸರನ್ನು ನಿದ್ದೆಗೆಡಿಸಿದ ಒಂದು ವಿಚಿತ್ರ ಕಿಡ್ನ್ಯಾಪ್ ಕೇಸ್. ಯುವತಿಯ ಅಪಹರಣ ಆಗಿದೆ ಅಂತಾ 112 ಸಹಾಯವಾಣಿಗೆ ಬಂದ ಕರೆಯನ್ನು ಬೆನ್ನತ್ತಿ ಹೋದ ಪೊಲೀಸರಿಗೆ ಕೊನೆಯಲ್ಲಿ ಸಿಕ್ಕಿದ್ದು ರೋಚಕ ತಿರುವು. ಇಡೀ ಪ್ರಕರಣ ಸುಖಾಂತ್ಯ ಕಂಡಿದ್ದಲ್ಲದೆ, ಬೆಂಗಳೂರು ಪೊಲೀಸರ ಕಾರ್ಯವೈಖರಿಗೆ ಇದು ಸಾಕ್ಷಿಯಾಯಿತು.
ಹೌದು, ನಿನ್ನೆ (ನ.04) ಬೆಳಗ್ಗೆ 4 ಗಂಟೆಗೆ 112 ಸಹಾಯವಾಣಿಗೆ ಒಂದು ಕರೆ ಬಂದಿತು. ಕರೆ ಮಾಡಿದ ವ್ಯಕ್ತಿ, ಯುವತಿಯೊಬ್ಬಳನ್ನು ಅಪಹರಿಸಿಕೊಂಡು ಕಾರಲ್ಲಿ ಕರೆದೊಯ್ಯಲಾಗುತ್ತಿದೆ ಎಂದು ದೂರು ನೀಡಿದ್ದ. ಆದರೆ, ಆ ಯುವತಿ ಯಾರು? ಆಕೆಯ ಹಿನ್ನಲೆ ಏನು? ಎಂಬ ಮಾಹಿತಿ ಇರಲಿಲ್ಲ. ಕರೆ ಮಾಡಿದ್ದು, ಯಾರು ಅಂತಾ ವಿಚಾರಿಸಿದಾಗ ಆತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶೇಖರ್ ಎಂಬುದು ಗೊತ್ತಾಯಿತು.
ಈ ಘಟನೆ ಬಾಣಸವಾಡಿಯ ಸುಬ್ಬಯ್ಯನಪಾಳ್ಯ ರಸ್ತೆಯಲ್ಲಿ ನಡೆದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ಬಾಣಸವಾಡಿ ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚನೆ ಮಾಡಿಕೊಂಡು ಕಾರ್ಯಾಚರಣೆಗೆ ಇಳಿಯಲಾಯಿತು. ಕಮಿಷನರ್ ಪ್ರತಾಪ್ ರೆಡ್ಡಿ ಹಾಗೂ ಡಿಸಿಪಿ ಭೀಮಾಶಂಕರ್ ಗುಳೇದ್ ಅವರು ಮಾಸ್ಟರ್ ಕಂಟ್ರೋಲ್ ರೂಮ್ಗೆ ಮಾಹಿತಿ ನೀಡಿದ ಬಳಿಕ ಬರೋಬ್ಬರಿ ನೂರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪೊಲೀಸರು ಪರಿಶೀಲಿಸಿದ್ದರು.
ಈ ಪ್ರಕರಣದಲ್ಲಿ ಒಂದು ಬೈಕ್ ನಂಬರ್ ಟ್ರ್ಯಾಕ್ ಮಾಡಿಕೊಂಡು ಸಿಸಿಟಿವಿ ಪರಿಶೀಲನೆ ಮಾಡಿದಾಗ ಕೊನೆಗೂ ಯುವತಿಯ ಸುಳಿವು ಪತ್ತೆಯಾಯಿತು. ದೆಹಲಿಯಲ್ಲಿ ಮಾಡೆಲ್ ಆಗಿದ್ದ ಯುವತಿ ಅಮೃತಾ ಎಂಬುದು ಬೆಳಕಿಗೆ ಬಂದಿತು. ಬಳಿಕ ಆ ಯುವತಿಯ ಸ್ನೇಹಿತನನ್ನು ಪತ್ತೆ ಹಚ್ಚಿ, ವಿಚಾರಣೆ ಮಾಡಿದಾಗ ಆಶ್ಚರ್ಯ ಸಂಗತಿ ಬೆಳಕಿಗೆ ಬಂದಿತು.
ಅಷ್ಟಕ್ಕೂ ನಿನ್ನೆ ನಡೆದಿದ್ದು, ಅಪಹರಣವಲ್ಲ, ಬೆಳಗ್ಗೆ ಸ್ನೇಹಿತನ ಮನೆಗೆ ಬಂದಾಗ ಅಮೃತಾಗೆ ಲೋ ಬಿಪಿಯಾಗಿತ್ತು. ರಸ್ತೆಯಲ್ಲಿ ಸುಸ್ತಾಗಿ ನಿಂತಿದ್ದ ಆಕೆಯನ್ನು ಸ್ನೇಹಿತ ಕಾರಿನ ಕೂರಿಸಿಕೊಂಡು ಕರೆದೊಯ್ದಿದ್ದ. ಅದೇ ರಸ್ತೆಯಲ್ಲಿ ಬರ್ತಿದ್ದ ಶೇಖರ್ಗೆ ಅದು ಅಪಹರಣದ ರೀತಿ ಕಂಡಿದೆ. ಹೀಗಾಗಿ ಆತ ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದ.
ನಿನ್ನೆ ಸಂಜೆ ಮೂರು ಗಂಟೆಗೆ ಪ್ರಕರಣ ಸುಖಾಂತ್ಯಗೊಂಡಿದ್ದು, ಪೊಲೀಸರು ನಿಟ್ಟಿಸಿರು ಬಿಟ್ಟಿದ್ದಾರೆ. ಬಾಣಸವಾಡಿ ಇನ್ಸ್ಪೆಕ್ಟರ್ ಕಾರ್ಯವೈಖರಿಗೆ ಪೂರ್ಯ ವಿಭಾಗ ಡಿಸಿಪಿ ಭೀಮಾ ಶಂಕರ್ ಗುಳೇದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಪ್ರಕರಣ ಬೆಂಗಳೂರು ಪೊಲೀಸ್ರ ಕ್ಷಿಪ್ರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. (ದಿಗ್ವಿಜಯ ನ್ಯೂಸ್)
ನಾಯಿ ಕಚ್ಚಿದ 6 ತಿಂಗಳ ಬಳಿಕ ಯುವಕನಲ್ಲಾದ ಬದಲಾವಣೆ ನೋಡಿ ಪಾಲಕರು ಶಾಕ್!
ನಿಮ್ಮ ಕಣ್ಣಿಗೊಂದು ಸವಾಲು! ಸಾಧ್ಯವಾದ್ರೆ ಈ ಫೋಟೋದಲ್ಲಿ ಅಡಗಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ