ಬೆಂಗಳೂರು: ಅಪಹರಣವಾಗಿದ್ದ ಬಾಲಕನನ್ನು 48 ಗಂಟೆಗಳೊಳಗೆ ಪತ್ತೆ ಹಚ್ಚಿದ ಪೊಲೀಸರು, ಪಾಲಕರ ಮಡಿಲು ಸೇರಿಸಿದ್ದಾರೆ. ಬಸವರಾಜು ಮತ್ತು ಲಕ್ಷ್ಮೀ ದಂಪತಿಯ ಮಗ ಅರ್ಜುನ್ (3) ಅಪಹರಣವಾಗಿದ್ದ ಬಾಲಕ.
ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಾಪುರ ಲೇಔಟ್ ನಲ್ಲಿ ಬಾಲಕನ ಅಪಹರಣವಾಗಿತ್ತು. ಈ ಸಂಬಂಧ ವಿದ್ಯಾರಣ್ಯಪುರ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು.
ವಿದ್ಯಾರಣ್ಯಪುರ ಮತ್ತು ಸುಬ್ರಹ್ಮಣ್ಯಪುರ ಪೊಲೀಸರ ಸಮಯ ಪ್ರಜ್ಞೆಯಿಂದ ಬಾಲಕ ಪತ್ತೆಯಾಗಿದ್ದಾನೆ. ಅಪಹರಣಕಾರರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಮನೆಯ ಮುಂದೆ ಆಟವಾಡುತ್ತಿದ್ದಾಗ ಅರ್ಜುನ್ ಅಪಹರಣಕ್ಕೆ ಒಳಗಾಗಿದ್ದ. ಗಾರೆ ಕೆಲಸ ಮಾಡುವ ಬಸವರಾಜು ಮತ್ತು ಲಕ್ಷ್ಮೀ ದಂಪತಿ ಫೆ.29ರ ಬೆಳಗ್ಗೆ ಬಾಲಕನನ್ನು ಬಿಟ್ಟು ಕೆಲಸಕ್ಕೆ ಹೋಗಿದ್ದರು. ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕ ಸ್ವಲ್ಪ ಹೊತ್ತಿನ ಬಳಿಕ ಕಾಣೆಯಾಗಿದ್ದ. ಎಲ್ಲೆಡೆ ಹುಡುಕಾಟ ನಡೆಸಿ ಕೊನೆಗೆ ಎಲ್ಲಿಯೂ ಕಾಣದೆ ಇದ್ದಾಗ ಮಧ್ಯಾಹ್ನ ಠಾಣೆಗೆ ಹೋಗಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಟಿ.ಎಲ್. ಪ್ರವೀಣ್ ಕುಮಾರ್ ನೇತೃತ್ವದ ತಂಡ, ಘಟನಾ ಸ್ಥಳದ ಅಕ್ಕಪಕ್ಕದ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಬಾಲಕನನ್ನು ಅಪರಿಚಿತ ವ್ಯಕ್ತಿ ಎತ್ತಿಕೊಂಡು ಹೋಗುವ ದೃಶ್ಯ ಸೆರೆಯಾಗಿತ್ತು. ಈ ಆಧಾರದ ಮೇಲೆ ಮತ್ತು ಬಾಲಕ ಫೋಟೋವನ್ನು ನಗರದ ಎಲ್ಲ ಠಾಣಾ ಸಿಬ್ಬಂದಿ ವಾಟ್ಸ್ಆ್ಯಪ್ಗೆ ರವಾನಿಸಿ ಮಾಹಿತಿ ಕೋರಿದ್ದರು.
ಸೋಮವಾರ ಬೆಳಗ್ಗೆ ಮಲ್ಲೇಶ್ವರದಲ್ಲಿ ರಸ್ತೆಬದಿ ಅಳುತ್ತಿದ್ದ ಬಾಲಕನನ್ನು ನೋಡಿದ ವ್ಯಕ್ತಿಯೊಬ್ಬರು ತನ್ನ ಮನೆಗೆ ಕರೆದೊಯ್ದು ಆರೈಕೆ ಮಾಡಿದ್ದರು. ಜತೆಗೆ ಮಲ್ಲೇಶ್ವರ ಠಾಣೆಗೂ ಮಾಹಿತಿ ನೀಡಿದ್ದರು. ವಿದ್ಯಾರಣ್ಯಪುರ ಸಿಬ್ಬಂದಿ ತಕ್ಷಣ ತೆರಳಿ ನೋಡಿದಾಗ ಕಾಣೆಯಾಗಿದ್ದ ಬಾಲಕ ಎಂಬುದು ಖಚಿತವಾಗಿ ಕರೆದೊಯ್ದು ಪಾಲಕರ ಮಡಿಲಿಗೆ ಸೇರಿಸಿದ್ದಾರೆ.