ಬೆಂಗಳೂರು: ಕಾಫಿ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಶುರುವಾದ ಕಲಹವು ತಾರಕಕ್ಕೇರಿ ಕೊನೆಗೆ ಪತಿರಾಯ ತನ್ನ ಮಡದಿಯ ಮೇಲೆ ಕುದಿಯುವ ನೀರನ್ನು ಎರಚಿರುವ ಅಮಾನವೀಯ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಮ್ಗೆ ಕಾಲ್ ಮಾಡಿದ ಮಹಿಳೆ ಸಹಾಯಕ್ಕಾಗಿ ಮೊರೆಯಿಟ್ಟಾಗ, ಆಕೆಗೆ ಮಹಿಳಾ ಸಹಾಯವಾಣಿಗೆ ಕರೆ ಮಾಡುವಂತೆ ಸೂಚಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಏಪ್ರಿಲ್ 16ರಂದು ನಡೆದಿದೆ.
ಸಹಾಯವಾಣಿಗೆ ಕರೆ ಮಾಡಿದ ಮಹಿಳೆ, ಕಾಫಿ ನೀಡಲು ನಿರಾಕರಿಸಿದ್ದಕ್ಕೆ ನನ್ನ ಪತಿ ಕುದಿಯುವ ನೀರನ್ನು ನನ್ನ ಮೇಲೆ ಎರಚಿದ ಎಂದು ಆರೋಪಿಸಿದ್ದಾಗಿ ಮಹಿಳಾ ಸಹಾಯವಾಣಿಯ ಹಿರಿಯ ಸಮಾಲೋಚಕಿ ಬಿ.ಎಸ್. ಸರಸ್ವತಿ ಅವರು ತಿಳಿಸಿದ್ದಾರೆ.
ದಕ್ಷಿಣ ದೊಡ್ಡಬಳ್ಳಾಪುರದಲ್ಲಿ ಪತಿಯೊಂದಿಗೆ ವಾಸವಿದ್ದ ಸಂತ್ರಸ್ತೆಗೆ ಒಂದು ಮಗುವಿದೆ. ಕರೊನಾ ಲಾಕ್ಡೌನ್ ಕುಟುಂಬದ ಮೇಲೆ ಪರಿಣಾಮ ಬೀರಿದ್ದು, ಅನೇಕ ದಂಪತಿಗಳ ನಡುವೆ ಈ ಸಮಯದಲ್ಲಿ ಕೌಟಂಬಿಕ ಕಲಹಗಳಾಗಿವೆ. ಅದಕ್ಕೆ ಆರ್ಥಿಕ ಬಿಕ್ಕಟ್ಟು ಕೂಡ ಒಂದು ಕಾರಣವಾಗಿದೆ. ಈ ಪ್ರಕರಣದಲ್ಲೂ ಇದೇ ಆಗಿರುವುದು. ಸಂತ್ರಸ್ತೆ ಕುಟಂಬ ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿತ್ತು. ಪತಿ ಹಳೆ ಕಬ್ಬಿಣದ ವ್ಯಾಪಾರಿಯಾಗಿದ್ದ. ಲಾಕ್ಡೌನ್ನಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ.
ಏಪ್ರಿಲ್ 16ರ ಮಧ್ಯಾಹ್ನ ಕಾಫಿಗಾಗಿ ಬೇಡಿಕೆ ಇಟ್ಟಿದ್ದ. ಆದರೆ, ನನಗೆ ಅಡುಗೆ ಮನೆಯಲ್ಲಿ ತುಂಬಾ ಕೆಲಸವಿದೆ ಎಂದು ಹೇಳಿ ಕಾಫಿ ನೀಡಲು ಮಹಿಳೆ ನಿರಾಕರಿಸಿದ್ದಳು. ಇದು ಇಬ್ಬರ ನಡುವಿನ ಜಗಳಕ್ಕೆ ಕಾರಣವಾಯಿತು. ಅದು ತಾರಕಕ್ಕೇರಿದಾಗ ಸ್ಟೌ ಮೇಲೆ ಇಟ್ಟಿದ್ದ ಪಾತ್ರೆಯಲ್ಲಿ ಕುದಿಯುತ್ತಿದ್ದ ನೀರನ್ನು ತೆಗೆದು ಹಿಳೆಯ ಮೇಲೆ ಪತಿ ಸುರಿದಿದ್ದಾನೆ. ಸುಟ್ಟಗಾಯಗಳಿಂದ ಬಳಲುತ್ತಿದ್ದ ಆಕೆಯನ್ನು ಹಾಗೆಯೇ ಬಿಟ್ಟು ಪತಿ ಪರಾರಿಯಾಗಿದ್ದಾನೆ.
ನೋವಿನಿಂದ ಮಹಿಳೆ ಅಳುವುದನ್ನು ಕೇಳಿದ ನೆರೆ ಮನೆಯವರು ಓಡಿ ಬಂದಿ ಅವಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಆಕೆ ಕಂಟ್ರೋಲ್ ರೂಮ್ಗೆ ಫೋನ್ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಸಂತ್ರಸ್ತೆ ಕುಟುಂಬದಿಂದ ಕಿ.ಮೀ ದೂರದಲ್ಲಿ ವಾಸವಿದ್ದ ಆಕೆ ಸಹೋದರನನ್ನು ಸಂಪರ್ಕಿಸಿದ ಮಹಿಳಾ ಸಹಾಯವಾಣಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ್ದಾರೆ.
ಶೇ. 20ರಷ್ಟು ಸುಟ್ಟ ಗಾಯಗಳಿಂದ ಬಳಲಿರುವ ಸಂತ್ರಸ್ತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪತಿ ವಿರುದ್ಧ ದೂರು ನೀಡುವಂತೆ ಮಹಿಳೆಗೆ ಸಲಹೆ ನೀಡಿದ್ದು, ಪ್ರಕರಣ ಸದ್ಯ ಚಾಲ್ತಿಯಲ್ಲಿದೆ. (ಏಜೆನ್ಸೀಸ್)
ನೀವು ಹೆಚ್ಚಿನ ಸಮಯ ಟಿವಿ ವೀಕ್ಷಿಸುತ್ತೀರಾ? ಹಾಗಾದ್ರೆ ಈ ಸ್ಟೋರಿಯನ್ನು ತಪ್ಪದೇ ಓದಿ…