ಯಂಕಣ್ಣ ಸಾಗರ್
ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆಯ ವಾತಾವರಣ, ಡ್ರಗ್ಸ್ ಮಾಫಿಯಾ, ಸೈಬರ್ ಅಪರಾಧ ಮಟ್ಟಹಾಕುವುದು, ತಂತ್ರಜ್ಞಾನ ಬಳಸಿಕೊಂಡು ಸ್ಮಾರ್ಟ್ ವರ್ಕ್ ಮಾಡುವುದು.. ಬೆಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಕಮಲ್ ಪಂತ್ ಮಾತುಗಳಿವು. ಬೆಂಗಳೂರು ಉಗ್ರರ ತಾಣವಾಗುತ್ತಿದೆ ಎಂಬ ವಿಚಾರ ಆಗಾಗ ಕೇಳಿಬರುತ್ತಲೇ ಇರುತ್ತದೆ. ಕರ್ನಾಟಕ ಪೊಲೀಸರು ನಿರಂತರವಾಗಿ ಅಲರ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಯೋತ್ಪಾದಕರ ಸಂಚನ್ನು ಹಲವು ಬಾರಿ ವಿಫಲಗೊಳಿಸಿದ್ದೇವೆ. ಜನರ ಸುರಕ್ಷತೆಯೇ ಪೊಲೀಸರ ಪ್ರಮುಖ ಆದ್ಯತೆಯಾಗಿರುವುದರಿಂದ, ಅನಾವಶ್ಯಕ ವಿಚಾರಗಳಿಗೆ ಜನ ಆತಂಕಪಡಬೇಕಿಲ್ಲ ಎಂದು ಅಭಯ ನೀಡಿದ್ದಾರೆ. ತಮ್ಮ ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಹೊಸ ಕಮಿಷನರ್ ಹಂಚಿಕೊಂಡ ಸಂಪೂರ್ಣ ಮಾಹಿತಿ ಇಲ್ಲಿದೆ.
* ನಿಮ್ಮ ಮುಂದಿರುವ ಸವಾಲುಗಳೇನು?
ಕರೊನಾ ಆರಂಭದ ದಿನದಿಂದಲೂ ಪೊಲೀಸ್ ಸಿಬ್ಬಂದಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಕರೊನಾ ಡ್ಯೂಟಿ ಜೊತೆಗೆ ಕಾನೂನು ಸುವ್ಯಸ್ಥೆಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಜನಜೀವನ ಸಹಜ ಸ್ಥಿತಿಗೆ ಬರಲಿದೆ. ಸಿಬ್ಬಂದಿ ಕೊರತೆ ಇರುವುದರಿಂದ ಸಮತೋಲನ ಕಾಯ್ದುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡುವುದೇ ಸವಾಲಿನ ಕೆಲಸ. ಈಗಾಗಲೇ 4 ತಿಂಗಳು ಕರೊನಾ ಡ್ಯೂಟಿಯನ್ನು ಹೆಚ್ಚು ಸಮರ್ಥವಾಗಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಭಾಯಿಸಿದ್ದಾರೆ.
* ನಿಮ್ಮ ಮುಂದಿನ ಯೋಜನೆ ಏನು?
ಬೆಂಗಳೂರಿನಲ್ಲಿ ಪ್ರಬುದ್ಧ ಜನರಿದ್ದಾರೆ. ಪ್ರತಿನಿತ್ಯ ಮಹಿಳೆಯರು ಮತ್ತು ಮಕ್ಕಳು ಶಾಲಾ ಕಾಲೇಜುಗಳಿಗೆ ಹಾಗೂ ಕಚೇರಿ ಕೆಲಸಗಳಿಗೆ ನಿರ್ಭೀತಿಯಿಂದ ಹೋಗಿ, ವಾಪಸ್ ಮನೆಗೆ ಬರುವಂತಹ ವಾತಾವರಣ ಕಲ್ಪಿಸುವುದು ಪ್ರಮುಖ ಗುರಿ. ತಂತ್ರಜ್ಞಾನವನ್ನು ಬಳಸಿಕೊಂಡು ಸ್ಮಾರ್ಟ್ ವರ್ಕ್ ಮಾಡಲಾಗುತ್ತದೆ. ಕಾನೂನಿನ ಅರಿವಿರುವುವರಿಂದ ಸಲಹೆ ಮತ್ತು ಸಹಕಾರ ಪಡೆಯುತ್ತೇನೆ. ‘ಬೆಂಗಳೂರು ಅತ್ಯಂತ ಸುರಕ್ಷಿತ ನಗರ’ ಎಂಬುದನ್ನು ಇಲ್ಲಿನ ನಿವಾಸಿಗಳ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡುವುದೇ ಗುರಿ.
ಇದನ್ನೂ ಓದಿ: ಶಕುಂತಲಾದೇವಿಗೆ 40 ವರ್ಷ ನಂತರ ಗಿನ್ನೆಸ್ ಗೌರವ
* ಡ್ರಗ್ ಮಾಫಿಯಾ ಹಾವಳಿ ತಡೆಯಲು ಕ್ರಮವೇನು?
ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್ ಸೇವನೆಗೆ ಬಲಿಯಾಗುತ್ತಿದ್ದಾರೆ. ವಿದೇಶದಿಂದ ವಿವಿಧ ರೂಪದಲ್ಲಿ ಡ್ರಗ್ಸ್ ಸರಬರಾಜು ಆಗುತ್ತಿದೆ. ಸಿಸಿಬಿ ಮಾದಕ ವಸ್ತು ನಿಗ್ರಹ ದಳವನ್ನು ಮತ್ತಷ್ಟು ಬಲಪಡಿಸಲಾಗುವುದು. ನಗರದಲ್ಲಿನ ಶಾಲಾ- ಕಾಲೇಜುಗಳಲ್ಲಿ ವಿಶೇಷ ಕಾರ್ಯಾಗಾರದ ಮೂಲಕ ಜಾಗೃತಿ ಮೂಡಿಸಲಾಗುವುದು. ಈ ಬಗ್ಗೆ ಪಾಲಕರು ಸಹ ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು.
ಇದನ್ನೂ ಓದಿ: ಪಶುವೈದ್ಯಕೀಯ ಇಲಾಖೆಗೆ ಪ್ರ’ಭಾರ’
* ಸೈಬರ್ ಕ್ರೈಂ ಮಿತಿ ಮೀರಿದ್ದು, ನಿಯಂತ್ರಣಕ್ಕೆ ಹೊಸ ಪ್ಲಾನ್?
ಸೈಬರ್ ಕಳ್ಳರು ಎಲ್ಲಿಯೋ ಕುಳಿತು ವಂಚಿಸುತ್ತಿರುತ್ತಾರೆ. ಒಂದು ಸೈಬರ್ ಪ್ರಕರಣವನ್ನು ಪತ್ತೆಹಚ್ಚುವುದು ಸುಲಭದ ಕೆಲಸವಲ್ಲ. ಇದಕ್ಕೆ ಸೂಕ್ತ ತಂಡ ಬೇಕಾಗುತ್ತದೆ. ಹೀಗಾಗಿ, ನಗರದಲ್ಲಿರುವ ಸಿಇಎನ್ ಠಾಣೆಗಳನ್ನು ಬಲಪಡಿಸಬೇಕಿದೆ. ಈ ವಿಚಾರ ಸರ್ಕಾರದ ಗಮನದಲ್ಲೂ ಇದೆ. ಮತ್ತೊಮ್ಮೆ ರ್ಚಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ಇದನ್ನೂ ಓದಿ: ಸಿವಿಲ್ ಇಂಜಿನಿಯರ್ ನೇಮಕ ಪ್ರಕ್ರಿಯೆ ಗುಮಾನಿ
* ರೌಡಿ, ಗೂಂಡಾ, ಸಮಾಜಘಾತುಕರಿಗೆ ನಿಮ್ಮ ಎಚ್ಚರಿಕೆ ಏನು?
ನಗರದಲ್ಲಿ ರೌಡಿಸಂ ಎಂಬುದನ್ನು ಸಂಪೂರ್ಣವಾಗಿ ಮಟ್ಟ ಹಾಕಲಾಗಿದೆ. ಅಲ್ಲಲ್ಲಿ ಪುಡಿರೌಡಿಗಳ ಹಾವಳಿ ಇರಬಹುದು. ಹಿಂದೆ ಇದ್ದ ವಾತಾವರಣ ಈಗೆಲ್ಲೂ ಇಲ್ಲ. ಅಂಥವರಿಗೆ ಬೆಂಗಳೂರಿನಲ್ಲಿ ಅಷ್ಟೇ ಅಲ್ಲ, ರಾಜ್ಯದಲ್ಲಿ ಎಲ್ಲಿಯೂ ವಾಸ ಮಾಡಲು ಅವಕಾಶ ಕೊಡುವುದಿಲ್ಲ. ಮೀಟರ್ ಬಡ್ಡಿ ದಂಧೆಯನ್ನು ನಿಯಂತ್ರಿಸಲಾಗುವುದು.