ಬಂಕಾಪುರ: ನಮ್ಮ ಕಾಲೇಜ್ನಲ್ಲಿ ಓದಿದ ಮತ್ತು ಓದುತ್ತಿರುವ ವಿದ್ಯಾರ್ಥಿಗಳ ಜತೆಗೆ ಜಿಲ್ಲೆಯ ನಿರುದ್ಯೋಗಿ ಯುವಕರು ಉತ್ತಮ ಕಂಪನಿಗಳ ಜತೆಗೆ ಸರ್ಕಾರಿ ಕೆಲಸ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಚಂದ್ರಾನಾಯ್ಕ ಎಂ. ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಉದ್ಯೋಗ ಮಾಹಿತಿ ಕೋಶ ಹಾಗೂ ಉದ್ಯೋಗ ವಿನಿಮಯ ಕಚೇರಿ ಹಾವೇರಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲೇಜಿನಲ್ಲಿ ತಿಂಗಳ ಹಿಂದೆಯೇ ಜಾಬ್ ರಜಿಸ್ಟ್ರೇಶನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಕಷ್ಟು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಧೈರ್ಯದಿಂದ ಸಂದರ್ಶನದಲ್ಲಿ ಭಾಗವಹಿಸಿ ತಮಗೆ ಸಿಕ್ಕ ಕೆಲಸಕ್ಕೆ ಹಾಜರಾಗಬೇಕು ಎಂದರು.
ಉದ್ಯೋಗ ಅಭಿವೃದ್ಧಿ ಅಧಿಕಾರಿ ಅನೀಲ್ಸಿಂಗ್ ಎನ್.ಜೆ., ಉದ್ಯೋಗ ಮಾಹಿತಿ ಸಂಚಾಲಕ ನಿಂಗಪ್ಪ ಕಲಕೋಟಿ, ಪ್ರೊ. ಸುಭಾಷ ರಾಜಮಾನೆ ಮಾತನಾಡಿದರು.
ಹುಬ್ಬಳ್ಳಿ, ದಾವಣಗೆರೆ, ರಾಣೆಬೆನ್ನೂರ ಸೇರಿದಂತೆ ಒಟ್ಟು 8 ಕಂಪನಿಗಳು ಭಾಗವಹಿಸಿದ್ದವು. ಕಾಲೇಜ್ ವಿದ್ಯಾರ್ಥಿಗಳ ಜತೆಗೆ ಜಿಲ್ಲೆಯ ವಿವಿಧ ಭಾಗಗಳಿಂದ 266 ಯುವಕರು ಸಂದರ್ಶನದಲ್ಲಿ ಭಾಗವಹಿಸಿದ್ದರು. ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಕೆಲಸಕ್ಕೆ ಆಯ್ಕೆಯಾಗಿದ್ದಾರೆ.
ಬಸವನಗೌಡ ಪಾಟೀಲ, ಐಕ್ಯೂಎಸಿ ಸಂಚಾಲಕಿ ಲುಬ್ನಾನಾಝå್, ರವಿ ಮೂಗೂರ, ಪ್ರೊ. ವಿಜಯ ಗುಡಗೇರಿ, ಉಮೇಶ ಕರ್ಜಗಿ, ಪ್ರೊ. ವಿಜಯಲಕ್ಷ್ಮೀ, ಪ್ರೊ. ದಿನೇಶಪ್ಪ ಶಿಂಗಾಪುರ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.