ಚಿತ್ರದುರ್ಗ: ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಲು ಮಾರ್ಚ್ 4ರಂದು ಚಿತ್ರದುರ್ಗಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದೇ ದಿನ 2000 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸುವರು.
ನಗರದ ವಿಜ್ಞಾನ ಕಾಲೇಜು ಮೈದಾನದಲ್ಲಿ ಅಂದು ನಡೆಯಲಿರುವ ಫಲಾನುಭವಿಗಳ ಸಮವೇಶದ ಹಿನ್ನೆಲೆಯಲ್ಲಿ ಜಿಲ್ಲಾದಿಕಾರಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾಹಿತಿ ನೀಡಿದರು.
ಸರ್ಕಾರಿ ಮೆಡಿಕಲ್ ಕಾಲೇಜು, ಜಿಲ್ಲಾಡಳಿತ ಭವನ, ಬಹು ಗ್ರಾಮ ಕುಡಿವ ನೀರಿನ ಯೋಜನೆ, ವಸತಿ ಯೋಜನೆ ಸೇರಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ವಾಲ್ಮೀಕಿ ಹಾಗೂ ಲಿಡ್ಕರ್ ಭವನಗಳನ್ನು ಉದ್ಘಾಟಿಸುವರೆಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ.ರಾಮ್ಪ್ರಸಾತ್ ಮನೋಹರ್ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯ ಫಲಾನುಭವಿಗಳ ಸಮಾವೇಶ, ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಲಕ್ಷಾಂತರ ಫಲಾನುಭವಿಗಳಿದ್ದಾರೆ. ಸಮಾವೇಶದ ಯಶಸ್ಸಿಗೆ ಸಕ್ರಿಯವಾಗಿ ಎಲ್ಲರೂ ತೊಡಗಿಸಿಕೊಳ್ಳ ಬೇಕು. ಕೃಷಿ,ಆರೋಗ್ಯ, ಶಿಕ್ಷಣ, ಸಹಕಾರ, ಆಹಾರ ಸೇರಿ ವಿವಿಧ ಇಲಾಖೆಗಳಿಂದ 1 ಲಕ್ಷ ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆ ತರಬೇಕು ಎಂದು ತಿಳಿಸಿದರು.
ಊಟ, ಕುಡಿಯುವ ನೀರು, ಸುರಕ್ಷಿತ ಸಾರಿಗೆ ಇತ್ಯಾದಿ ವ್ಯವಸ್ಥೆಗಳೆಲ್ಲವೂ ಸಮಪರ್ಕವಾಗಿರ ಬೇಕು. ಊಟದ ಕೌಂಟರ್ಗಳು, ಕುಡಿಯುವ ನೀರಿನ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕು ಎಂದು ಸಲಹೆ ನೀಡಿದರು.
ಪ್ರತಿ 30 ಫಲಾನುಭವಿಗಳಿಗೆ ಒಬ್ಬರಂತೆ ಮೇಲ್ವಿಚಾರಕರನ್ನು ನಿಯೋಜಿಸಬೇಕು. ಫಲಾನುಭವಿಗಳು, ವಾಹನ, ಮಾರ್ಗ, ಮೇಲ್ವಿಚಾರಕರ ನಿಯೋಜನೆ ಕುರಿತು ಈ ಕೂಡಲೇ ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಫಲಾನುಭವಿಗಳಿಗೆ ಇಲಾಖಾವಾರು ಪ್ರತ್ಯೇಕ ಬ್ಯಾಡ್ಜ್ ವಿತರಿಸಬೇಕು. ನೀರು, ಆಹಾರದ ಗುಣಮಟ್ಟ ಪರಿಶೀಲಿಸಬೇಕು. ವಿದ್ಯಾರ್ಥಿಗಳ ಸುರಕ್ಷತೆ, ಪೊಲೀಸ್ ಬಂದೋಬಸ್ತ್, ವಾಹನ ನಿಲುಗಡೆ. ಶಿಷ್ಟಾಚಾರ ಪಾಲನೆಯತ್ತ ಗಮನ ನೀಡಲು ತಿಳಿಸಿದರು.
ಜಿಲ್ಲಾಧಿಕಾರಿ ಜಿಆರ್ಜೆ ದಿವ್ಯಾಪ್ರಭು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ದಿವಾಕರ್, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪ ವಿಭಾಗಾದಿಕಾರಿ ಆರ್.ಚಂದ್ರಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ಶಂಕುಸ್ಥಾಪನೆ-ಯೋಜನಾ ವೆಚ್ಚ (ಕೋಟಿ ರೂ.)
ಬಹುಗ್ರಾಮ ಕುಡಿವ ನೀರಿನ ಯೋಜನೆ- 593
ಸರ್ಕಾರಿ ಮೆಡಿಕಲ್ ಕಾಲೇಜು-500
ಪಿಡಬ್ಲುೃಡಿ ಇಲಾಖೆ ವಿವಿಧ ಕಾಮಗಾರಿಗಳು-200
ವಿವಿಧ ವಸತಿ ಯೋಜನೆಗಳು-90 ಕೋಟಿ ರೂ.
ಜಿಲ್ಲಾಡಳಿತ ಭವನ-47
ನಗರೋತ್ಥಾನ-40