ಸಾಲಿಗ್ರಾಮ: ಬಸವ ಜಯಂತಿ ಕಾರ್ಯಕ್ರಮವನ್ನು ತಾಲೂಕು ಆಡಳಿತದ ವತಿಯಿಂದ ಅರ್ಥಪೂರ್ಣವಾಗಿ ಮೇ 10ರಂದು ತಾಲೂಕು ಕಚೇರಿಯಲ್ಲಿ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಎಸ್.ಎನ್.ನರಗುಂದ ಹೇಳಿದರು.
ತಾಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು. ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಅವರ ವಿಚಾರ ಧಾರೆಗಳ ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗುವುದು. ಜಯಂತಿಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ಉಪ ತಹಸೀಲ್ದಾರ್ ಸತೀಶ್ ಕುಮಾರ್, ಶಿರಸ್ತೇದಾರ್ ಶಿವಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆಡಗ ನಟರಾಜ್, ಮುಖಂಡರಾದ ಕುಮಾರಸ್ವಾಮಿ, ತೇಜೋಮೂರ್ತಿ, ನಂದೀಶ್, ದಡದಹಳ್ಳಿ ನಟರಾಜ್, ಶಿವಕುಮಾರ್, ಜ್ಯೋತಿ ಪ್ರಕಾಶ್, ರವಿ, ಕಾರ್ಮಿಕ ಇಲಾಖೆಯ ಅನುಷಾ, ಶಂಕರ್ ಪಾಲ್ಗೊಂಡಿದ್ದರು.