ಬಳ್ಳಾರಿ: ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾಗಿದ್ದರೂ ಅದನ್ನು ಸರಿದೂಗಿಸಲು ಪ್ರಯಾಣ ದರ ಹೆಚ್ಚಳ ಮಾಡಬೇಕೆಂಬ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ದರ ಹೆಚ್ಚಳ ಮಾಡಿದರೆ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಬದಲಿಗೆ ಎಲೆಕ್ಟ್ರಿಕ್ ಬಸ್ಗಳನ್ನು ಮತ್ತಷ್ಟು ಓಡಿಸಲು ಯೋಜನೆ ರೂಪಿಸಲಾಗಿದ್ದು, ಟೆಂಡರ್ ಕರೆಯಲಾಗಿದ್ದು, ಈ ಯೋಜನೆಗಾಗಿ ಕೇಂದ್ರವು ಪ್ರತ್ಯೇಕ ಅನುದಾನ ನೀಡಲಿದೆ. ಮೊದಲ ಹಂತದಲ್ಲಿ 700 ಬಸ್ ಖರೀದಿಸಲಾಗುತ್ತಿದ್ದು, ರಾಜ್ಯದ ನಾನಾ ಮಹಾನಗರಗಳಲ್ಲಿ ಎಲೆಕ್ಟ್ರಿಕ್ ಬಸ್ಗಳನ್ನು ಓಡಿಸಲಾಗುವುದು ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಾರಿಗೆ ಇಲಾಖೆೆಯ ನಾಲ್ಕು ನಿಗಮಗಳು ನಷ್ಟದಲ್ಲಿವೆ. ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯಬೇಕಿದೆ. ಇದಕ್ಕೆ ಬೇಕಾದ ಕ್ರಮಕ್ಕೆ ಮುಂದಾಗಿದ್ದೇನೆ. ಕಳೆದ ವರ್ಷ 1,280 ಕೋಟಿ ರೂ. ಮತ್ತು ಪ್ರಸಕ್ತ ಸಾಲಿನಲ್ಲಿ 510.24 ಕೋಟಿ ರೂ. ನಷ್ಟವಾಗಿದೆ. ಹಳೆಯ ಬಸ್ಗಳ ಸ್ಕ್ರಾೃಪ್ ಪಾಲಸಿ ಚೆನ್ನಾಗಿದೆ. ಪ್ರಧಾನಿ ಸೂಚನೆಯಂತೆ ಅದನ್ನು ಅನುಷ್ಠಾನ ಮಾಡಲಾಗುವುದು. ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಿ, ಅಮಾನತುಗೊಂಡ ನೌಕರರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು. ಅವರ ವಿರುದ್ಧದ ಪ್ರಕರಣಗಳನ್ನು ವಜಾ ಮಾಡಲಾಗುವುದು ಎಂದರು.
ಸಚಿವ ಆನಂದ ಸಿಂಗ್ ಜತೆ ಮಾತನಾಡಿದ್ದು, ಈ ಕುರಿತಂತೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಅವರನ್ನು ದೆಹಲಿಗೆ ತೆರಳಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಆ.16 ರಂದು ದೆಹಲಿಗೆ ತೆರಳಬಹುದು.
| ಬಿ.ಶ್ರೀರಾಮುಲು, ಸಾರಿಗೆ ಸಚಿವ