ಬಳ್ಳಾರಿ: ನಾಡಿನ ಸಾಂಸ್ಕೃತಿಕ ರಾಯಭಾರಿ, ಅಂತಾರಾಷ್ಟ್ರೀಯ ರಂಗಭೂಮಿ ಹಾಗೂ ತೊಗಲುಗೊಂಬೆಯಾಟ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರ ಅಂತ್ಯ ಸಂಸ್ಕಾರ ಸೋಮವಾರ ಸಂಜೆ ತಾಲೂಕಿನ ಶಂಕರಬಂಡೆ ಗ್ರಾಮದ ಹತ್ತಿರದ ಧನಲಕ್ಷ್ಮಿ ಕ್ಯಾಂಪ್ನ ಅವರ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ನಗರದ ರಾಘವ ಕಲಾಮಂದಿರದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ವೀರಣ್ಣ ಅವರ ಅಳಿಯ ಖ್ಯಾತ ಹಿಂದುಸ್ತಾನಿ ಗಾಯಕ ವೆಂಕಟೇಶ್ಕುಮಾರ್ ಮಾವನ ನೆನೆದು ಭಾವುಕರಾದರು. ಅಂತಿಮ ದರ್ಶನದ ವೇಳೆ ವಿವಿಧ ಕಲಾವಿದರಿಂದ ನುಡಿ ನಮನ ಸಲ್ಲಿಸಲಾಯಿತು.