ಹೊಸಪೇಟೆ: ಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷದ ಜನಪರ ಕಾರ್ಯಕ್ರಮಗಳು, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದ ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಆ.28 ರಿಂದ ಜಿಲ್ಲೆಯಲ್ಲಿ ಗ್ರಾಮ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ಕಾಳಿದಾಸ ಜೆ.ಎನ್. ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಆ.28ರಂದು ನಗರದ ಜಿ.ಟಿ.ಕಾಂಪೌಂಡ್ನಿಂದ ವಾರ್ಡ್ವಾರು ಸಂಪರ್ಕ ಕಾರ್ಯಕ್ರಮ ಆರಂಭವಾಗಲಿದೆ. ಆ.29 ರಂದು ಕೂಡ್ಲಿಗಿಯ ಚಿಕ್ಕಜೋಗಿಹಳ್ಳಿ ಗ್ರಾಮದಿಂದ ಗ್ರಾಮ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಇದೇ ವೇಳೆ ಪಕ್ಷದ ಸದಸ್ಯತ್ವ ನೋಂದಣಿಯೂ ನಡೆಯಲಿದೆ. ಸ್ಥಳೀಯ ನಾಯಕರೊಂದಿಗೆ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿ, ಬೇರು ಮಟ್ಟದಿಂದ ಪಕ್ಷವನ್ನು ಬಲಗೊಳಿಸಿ, ವಿಧಾನಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಯತ್ನಿಸುತ್ತೇವೆ ಎಂದರು.
ಪಕ್ಷದ ನಗರ ಸಂಚಾಲಕ ರಿಜ್ವಾನ್, ಯೂಥ್ ಘಟಕದ ಸಂಚಾಲಕ ಮೈನುದ್ದೀನ್, ಡಾ.ಹನುಮಂತಪ್ಪ, ನಾಗರಾಜ ಹರಪನಹಳ್ಳಿ, ರೇವಣ್ಣ, ಅಶೋಕ, ಲೋಕೇಶ ನಾಯಕ, ಎಂ.ಡಿ.ಮದೀನ್, ರಘು ನಾಯಕ, ಗೋಪಾಲಕೃಷ್ಣ ಇದ್ದರು.