ಬಳ್ಳಾರಿ: ತಾಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲಿ ಶ್ರೀ ಎರ್ರಿತಾತನ ಮುತ್ತಿನ ರಥೋತ್ಸವ ಕಾರ್ಯಕ್ರಮ ಬುಧವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ಅಂಗವಾಗಿ ಎರ್ರಿತಾತನಿಗೆ ಅಷ್ಟೋತ್ತರ ಶಂಖಾಭಿಷೇಕ, ವಿಶೇಷ ಅಭಿಷೇಕ, ಅರ್ಚನೆ ಮತ್ತು ದೀಪಾರಾಧನೆ ನಡೆಯಿತು. ರಥೋತ್ಸವದ ಅಂಗವಾಗಿ ತಾತನಿಗೆ ವಿಶೇಷ ಅಲಂಕಾರ ಮಾಡಲಾಯಿತು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮತ್ತು ಆಂಧ್ರಪ್ರದೇಶದ ಸಾವಿರಾರು ಭಕ್ತರು ಆಗಮಿಸಿ, ರಥೋತ್ಸವಕ್ಕೆ ಹೂವನ್ನು ಸಮರ್ಪಿಸಿದರು. ಕಾರ್ಯಕ್ರಮದ ಅಂಗವಾಗಿ ಜಿಲಾನ್ ಭಾಷಾ ತಂಡದಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು. ಅಭಿನಯ ಕಲಾ ಕೇಂದ್ರದಿಂದ ಶ್ರೀಎರ್ರಿತಾತನ ನಾಟಕ ಪ್ರದರ್ಶನ ನಡೆಯಿತು. ಸಾವಿರಾರು ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.