ಬಳ್ಳಾರಿ: ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಭಾನುವಾರ ನಿಗದಿಯಾಗಿದ್ದ ಬಿಕಾಂ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಹೀಗಾಗಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಬಿಕಾಂ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಮ್ಯಾನೇಜ್ಮೆಂಟ್ ಅಕೌಂಟ್ ಪರೀಕ್ಷೆ ಮಧ್ಯಾಹ್ನ 2 ರಿಂದ 5ರವರೆಗೆ ನಿಗದಿಯಾಗಿತ್ತು. ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿಕೊಂಡು ಬಳ್ಳಾರಿ- ವಿಜಯನಗರ ಮತ್ತು ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ ಬಿಕಾಂ ವಿಭಾಗದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ವಿವಿಯ ಮೌಲ್ಯಮಾಪನ ವಿಭಾಗದ ಕುಲಸಚಿವ ಶಶಿಕಾಂತ ಉಡಿಕೇರಿ ಪರೀಕ್ಷೆ ಮುಂದೂಡಿ, ಎಲ್ಲ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದರು.
ಇದೇ ಮೊದಲಲ್ಲ
ವಿವಿ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಿ ನೇರವಾಗಿ ಕಾಲೇಜುಗಳಿಗೆ ಕಳಿಸಿತ್ತು. ಆದಾಗ್ಯೂ ಸೋರಿಕೆಯಾಗಿದ್ದು ಹೇಗೆ, ಯಾರಿಂದ ಎಂಬ ಪ್ರಶ್ನೆ ಮೂಡಿದೆ. ಅಲ್ಲದೆ ಇದೇ ಮೊದಲಲ್ಲ. ವಿವಿ ವ್ಯಾಪ್ತಿಯಲ್ಲಿ ಅನೇಕ ಸಲ ಪ್ರಶ್ನೆಪತ್ರಿಕೆ ಲೀಕ್ ಆಗಿರುವ ಉದಾಹರಣೆಗಳಿವೆ. ಎರಡೆರಡು ಬಾರಿ ಪ್ರಶ್ನೆಪತ್ರಿಕೆ ಮುದ್ರಿಸಬೇಕಾದರೆ ವಿವಿಗೆ ಅರ್ಥಿಕ ಹೊಡೆತ ಬೀಳಲಿದೆ. ಅಲ್ಲದೆ, ಪ್ರತಿಭಾವಂತ ವಿದ್ಯಾರ್ಥಿಗಳು ಕೂಡ ತೊಂದರೆ ಆನುಭವಿಸುತ್ತಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ ಎಂಬ ಮಾಹಿತಿ ಬಂದಿದ್ದರಿಂದ ಪರೀಕ್ಷೆಯನ್ನು ಮುಂದೂಡಿದ್ದೇವೆ. ಕೂಲಂಕಷವಾಗಿ ಪರೀಶಿಲಿಸಿ, ಪರೀಕ್ಷೆಯ ಮುಂದಿನ ದಿನಾಂಕ ತಿಳಿಸಲಾಗುವುದು.
| ಶಶಿಕಾಂತ ಉಡಿಕೇರಿ ಕುಲಸಚಿವ, ವಿಎಸ್ಕೆವಿವಿ, ಬಳ್ಳಾರಿ