ಬಳ್ಳಾರಿ: ಅಗ್ರಿಗೋಲ್ಡ್ ಕಂಪನಿಯಿಂದ ಮೋಸಹೋದ ರಾಜ್ಯದ ಗ್ರಾಹಕರಿಗೆ ನ್ಯಾಯ ಒದಗಿಸಲು ಕರ್ನಾಟಕ ಸರ್ಕಾರ ಮುಂದಾಗಬೇಕು ಎಂದು ಆಂಧ್ರಪ್ರದೇಶದ ಅಗ್ರಿಗೋಲ್ಡ್ ಗ್ರಾಹಕರ ಮತ್ತು ಏಜೆಂಟರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಮುಪ್ಪಾಳ ನಾಗೇಶ್ವರರಾವ್ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆಂಧ್ರದ ಮಾದರಿಯಲ್ಲೇ ಕರ್ನಾಟಕದಲ್ಲಿ ಕೂಡ 20 ಸಾವಿರ ರೂ.ಗಿಂತ ಕಡಿಮೆ ಹೂಡಿಕೆ ಮಾಡಿರುವ ಆಗ್ರಿಗೋಲ್ಡ್ ಗ್ರಾಹಕರಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು. ರಾಜ್ಯದಲ್ಲಿ 8.5 ಲಕ್ಷಕ್ಕೂ ಆಧಿಕ ಗ್ರಾಹಕರಿದ್ದು, ಅವರಿಂದ 1,700 ಕೋಟಿ ರೂ. ಸಂಗ್ರಹಿಸಿ ಸಂಸ್ಥೆಯು ವಂಚಿಸಿದೆ. ಆದರೆ, ಸರ್ಕಾರ ಮೌನ ವಹಿಸಿದೆ. ಕೂಡಲೇ ಸಂಸ್ಥೆಯ ಆಸ್ತಿ ಜಪ್ತಿ ಮಾಡಿ ಮಾರಾಟ ಮಾಡಬೇಕು. ಅದರಿಂದ ಬರುವ ಹಣವನ್ನು ಗ್ರಾಹಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಕರೊನಾ ಹಾಗೂ ನಿತ್ಯ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಈಡಾಗಿದ್ದು, ವಂಚಿತರಾದ ಹಲವು ಗ್ರಾಹಕರು, ಏಜೆಂಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣ ಹೈಕೋರ್ಟ್ ಮತ್ತು ಉಡುಪಿ ವಿಶೇಷ ನ್ಯಾಯಾಲಯಲ್ಲಿ ಇರುವ ಪ್ರಕರಣವನ್ನು ಶೀಘ್ರ ಇತ್ಯರ್ಥ ಮಾಡಲು ಆಂಧ್ರ ಮತ್ತು ಕರ್ನಾಟಕ ಸರ್ಕಾರ ಕ್ರಮ ವಹಿಸಬೇಕು. ಸ್ವಾಧೀನ ಪಡೆದುಕೊಂಡಿರುವ ಸಂಸ್ಥೆಯ ಆಸ್ತಿ ನಿರ್ವಹಣೆ ಅದಾಯದ ವಿವರವನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ಸಂಘದ ಕರ್ನಾಟಕ ಘಟಕದ ಗೌರವಾಧ್ಯಕ್ಷ ಕೆ.ನಾಗಭೂಷಣ್ ಮಾತನಾಡಿ, ಮುಂದಿನ ಹೋರಾಟದ ರೂಪುರೇಷಗಳ ಬಗ್ಗೆ ಬೆಂಗಳೂರಿನಲ್ಲಿ ನ.1ರಂದು ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಲಾಗುವುದು ಎಂದರು.