ಬಳ್ಳಾರಿ: ಅಗ್ನಿಪಥ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಗರ ಕಾಂಗ್ರೆಸ್ ಸಮಿತಿ ಸೋಮವಾರ ಪ್ರತಿಭಟನೆ ನಡೆಸಿತು.
ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಆಡಳಿತ ನಿರ್ವಹಣೆ ಹಾಗೂ ಸೇನೆಯಲ್ಲಿ ಖಾಲಿಯಾಗಿರುವ ಅಸಂಖ್ಯಾತ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ಅಗ್ನಿಪಥ ಎಂಬ ಯೋಜನೆಯನ್ನು ಪರಿಚಯಿಸಿದೆ. ದೇಶ ಭಕ್ತಿ, ಯುವ ಶಕ್ತಿ ಎಂಬ ಬಣ್ಣದ ಮಾತುಗಳಿಗೆ ಜನರು ಮರಳಾಗುವುದಿಲ್ಲ. ಕೇಂದ್ರ ಸರ್ಕಾರದ ಬೂಟಾಟಿಕೆ ಎಲ್ಲರಿಗೂ ಅರ್ಥವಾಗಿದೆ. ಹೀಗಾಗಿ ಅಗ್ನಿಪಥ ಯೋಜನೆಗೆ ಬಿಹಾರ, ಉತ್ತರ ಪ್ರದೇಶ ಹಾಗೂ ಪಂಜಾಬ್ಗಳಲ್ಲಿ ಯುವ ಶಕ್ತಿ ಪ್ರತಿಭಟನೆಗೆ ಇಳಿದಿದೆ. ಈಗಲಾದರೂ ಸರ್ಕಾರ ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಸೇನಾ ನೇಮಕಾತಿ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಮಹಾನಗರ ಪಾಲಿಕೆ ಮಹಾಪೌರ ರಾಜೇಶ್ವರಿ, ಉಪಮಹಾಪೌರ ಮಾಲನ್ ಬೀ, ಕಾಂಗ್ರೆಸ್ ಮುಖಂಡರಾದ ಎಲ್.ಮಾರೆಣ್ಣ, ಎ.ಮಾನಯ್ಯ, ಮುಂಡರಿಗಿ ನಾಗರಾಜ, ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಬಿ.ರಾಮ್ ಪ್ರಸಾದ್, ಅಲ್ಲಾಭಕ್ಷ, ಮಹಾನಗರ ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ, ಡಿ.ಅಯಾಜ್ ಅಹಮ್ಮದ್, ಎಂ.ಕುಮಾರಮ್ಮ, ಕಾರ್ಯದರ್ಶಿ ವೈ.ಶ್ರೀನಿವಾಸುಲು, ಕೆ.ಬಿ.ಅಂಜಿನಿ, ಬಿ.ಎಂ.ಸೂರ್ಯನಾರಾಯಣ, ಜಿ.ಎಸ್.ಈರಣ್ಣ ಗೌಡ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಸುಂಡಿ ನಾಗರಾಜ ಗೌಡ, ಅರ್ಷದ್ ಅಹಮ್ಮದ್ ಗನಿ, ಪೆರಂ ವಿವೇಕ್, ಕೌಲ್ ಬಜಾರ್ ಬ್ಲಾಕ್ ಉಪಾಧ್ಯಕ್ಷ ಉದಯ್ ಕುಮಾರ್ ಇದ್ದರು.