ಬೆಳಗಾವಿ: ಕೋಟ್ಯಾಂತರ ಭಾರತೀಯರ ಕನಸಾದ ಚಂದ್ರಯಾನ 3 ಉಪಗ್ರಹವನ್ನು ಹೊತ್ತ ಮಾರ್ಕ್ 3 ನೌಕೆ ನಭಕ್ಕೆ ಹಾರಿದೆ. ಇದೆಲ್ಲದರ ಹಿಂದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಹಿರಿಯ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ ರಿತು ಕರಿದಾಲ್ ಶ್ರೀವಾಸ್ತವ್ ಅವರು ಕಠಿಣ ಪರಿಶ್ರಮ ಅಡಗಿದ್ದು, ಅವರು ಈ ಯೋಜನೆ ಮುನ್ನಡೆಸುತ್ತಿದ್ದಾರೆ.
ಅಂದಹಾಗೆ ಇನ್ನೊಂದು ಮಹತ್ವದ ಸಂಗತಿ ಬೆಳಕಿಗೆ ಬಂದಿದೆ. ಅದೇನೆಂದರೆ ‘ಚಂದ್ರಯಾನ-3’ ಬಾಹ್ಯಾಕಾಶ ನೌಕೆಯ ಪ್ರಮುಖ ಬಿಡಿಭಾಗಗಳು ನಮ್ಮ ಕುಂದಾನಗರಿ ಬೆಳಗಾವಿಯಲ್ಲಿ ತಯಾರಾಗಿವೆ. ಹೌದು, ಇಲ್ಲಿನ ಸರ್ವೋ ಕಂಟ್ರೋಲ್ ಏರೋಸ್ಪೇಸ್ ಇಂಡಿಯಾ ಲಿಮಿಟೆಡ್ ಕಂಪನಿ ಸಿದ್ಧಪಡಿಸಿದ ಬಿಡಿ ಭಾಗಗಳು ಈ ಖಗೋಳಯಾನದ ಪೂರ್ಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ.
ಹೈಡ್ರಾಲಿಕ್ ಉಪಕರಣ, ವಾಲ್ಸ್ಗಳು, ಸ್ಕೂಲ್, ಸ್ಟೀವ್, ಮ್ಯಾನಿಫೋಲ್ಡ್ ಬ್ಲಾಕ್, ಎಲೆಕ್ಟ್ರಾನಿಕ್ ಸೆನ್ಸರ್ಗಳನ್ನು ಇದೇ ಕಂಪನಿಯಿಂದ ರವಾನಿಸಲಾಗಿದೆ. ಅಷ್ಟೇ ಅಲ್ಲ, ಚಂದ್ರಯಾನದ ಮೊದಲ ಹೆಜ್ಜೆಯಿಂದ ಹಿಡಿದು ಪೂರ್ಣವಾಗುವವರೆಗೂ ಇಲ್ಲಿನ ಉಪಕರಣಗಳು ಬಳಕೆಯಾಗಲಿವೆ.
ಚಂದ್ರಯಾನ 2 ರಲ್ಲಿಯೂ ಬಳಕೆ
ಈ ಕಂಪನಿಯು ಚಂದ್ರಯಾನ 2 ಹಾಗೂ ಮಂಗಳಯಾನಕ್ಕೂ ಬಿಡಿಭಾಗಗಳನ್ನು ಪೂರೈಸಿತ್ತು. ಈ ಕಂಪನಿ 15 ವರ್ಷಗಳಿಂದ ಇಸ್ರೋ ಸಂಸ್ಥೆಯೊಂದಿಗಿದೆ.