More

    ಬಜೆಟ್ ತಯಾರಿ ಆರಂಭ; ಹೊಸ ತೆರಿಗೆ ಪ್ರಸ್ತಾಪ, ಪರಿಷ್ಕರಣೆಗೆ ದಾರಿ ಹುಡುಕಾಟ

    ಬೆಂಗಳೂರು: ಮುಂದಿನ ಆರ್ಥಿಕ ಸಾಲಿನ ಆಯವ್ಯಯ ತಯಾರಿಕೆ ಪ್ರಕ್ರಿಯೆಯನ್ನು ಹಣಕಾಸು ಇಲಾಖೆ ಅಧಿಕೃತವಾಗಿ ಆರಂಭಿಸಿದೆ.
    2023-24ನೇ ಸಾಲಿನ ಬಜೆಟ್ ಗ್ಯಾರಂಟಿ ಕೇಂದ್ರಿತವಾಗಿದ್ದು, ಇತರೆ ಅಭಿವೃದ್ಧಿ ಚಟುವಟಿಕೆಗಳಿಗೆ ಸಹಜವಾಗಿ ಮಿತಿ ಇದೆ. ಹೀಗಾಗಿ 2024-25ನೇ ಸಾಲಿನ ಬಜೆಟ್ ಮೇಲಿನ ನಿರೀಕ್ಷೆ ಹೆಚ್ಚಿರುವ ಕಾರಣ ತಯಾರಿ ಕೂಡ ಸಹಜವಾಗಿ ಸವಾಲಿನದಾಗಿದೆ.
    ಸಾಮಾನ್ಯವಾಗಿ ಅಕ್ಟೋಬರ್- ನವೆಂಬರ್‌ನಲ್ಲಿ ಬಜೆಟ್ ತಯಾರಿ ಇಲಾಖಾ ಹಂತದ ಪ್ರಕ್ರಿಯೆಗಳು ಆರಂಭವಾಗುತ್ತವೆ. ಇದೀಗ ಚಟುವಟಿಕೆ ಆರಂಭಿಸಿದ್ದೇವೆ, ಇಲಾಖೆಗಳಿಗೆ ಸಂದೇಶಗಳನ್ನು ಕಳಿಸಲಾಗುತ್ತಿದೆ ಎಂದು ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ.
    ಜನವರಿ- ೆಬ್ರವರಿ ಆರಂಭದಲ್ಲಿ ಹಣಕಾಸು ಇಲಾಖೆ ಜವಾಬ್ದಾರಿ ಇರುವ ಮುಖ್ಯಮಂತ್ರಿಯವರು ಇಲಾಖೆ ಸಭೆ ನಡೆಸಿ ಬಜೆಟ್ ಅಂತಿಮಗೊಳಿಸುವರು. ಅದಕ್ಕೆ ಪೂರಕವಾಗಿ ಈಗಿನಿಂದಲೇ ಪ್ರಕ್ರಿಯೆ ಆರಂಭಿಸುವುದು ವಾಡಿಕೆಯಾಗಿದೆ.
    ಪ್ರಸ್ತುತ, ಇಲಾಖೆಗಳಲ್ಲಿನ ಎಲ್ಲಾ ಅಂದಾಜು ಅಧಿಕಾರಿಗಳು ಅಂದಾಜುಗಳನ್ನು ವೈಯಕ್ತಿಕವಾಗಿ ಗಮನಹರಿಸಿ 2023-24ರ ಪರಿಷ್ಕೃತ ಅಂದಾಜು ಮತ್ತು 2024-25ರ ಆಯವ್ಯಯ ಅಂದಾಜು ಸಂಬಂಧ ವರದಿ ಕಳಿಸಲು ಆರ್ಥಿಕ ಇಲಾಖೆ ಸೂಚನೆ ಕಳಿಸಿದೆ.
    ಹೊಸ ತೆರಿಗೆ ಪ್ರಸ್ತಾಪಿಸುವುದು ಅಥವಾ ಅಸ್ತಿತ್ವದಲ್ಲಿರುವ ತೆರಿಗೆ ಸ್ವರೂಪಗಳ ಪರಿಷ್ಕರಣೆಯಿಂದಾಗಲೀ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸುವ ಬಗ್ಗೆ ಪರಿಶೀಲಿಸಲು ಇಲಾಖಾ ಮುಖ್ಯಸ್ಥರು ಸರ್ಕಾರಕ್ಕೆ ತಿಳಿಸಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.
    ರಾಜಸ್ವ ಸ್ವೀಕೃತಿಯಲ್ಲಿ ತೆರಿಗೆಯೇತರ ರಾಜಸ್ವದ ಪಾಲು ಹಿಂದಿನ ಹಲವಾರು ವರ್ಷಗಳಿಂದಲೂ ಹೆಚ್ಚಳವಾಗುತ್ತಿಲ್ಲ. ಪ್ರಮುಖವಾಗಿ ವೆಚ್ಚ ವಸೂಲಾತಿ ಇಳಿಕೆ ಮತ್ತು ಕ್ಷೀಣತೆ, ಸಾರ್ವಜನಿಕ ಉದ್ದಿಮೆಗಳ ಕಳಪೆ ಕಾರ್ಯನಿರ್ವಹಣೆ, ಲಾಭಕರವಲ್ಲದ, ದುಬಾರಿ ಸಹಾಯಧನಗಳಿಂದಾಗಿ ತೆರಿಗೆಯೇತರ ರಾಜಸ್ವದ ಪ್ರಮಾಣ ನಗಣ್ಯ ಎಂದೇ ಅಧಿಕಾರಿಗಳು ಇಲಾಖೆ ಮುಖ್ಯಸ್ಥರುಗಳಿಗೆ ಬರೆದ ಸೂಚನಾ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
    ಆಡಳಿತ ಇಲಾಖೆಗಳು ಬಳಕೆ ಶುಲ್ಕ ಪರಿಷ್ಕರಿಸದಿರುವುದು, ಕಾಲಕಾಲಕ್ಕೆ ಕ್ರಮಬದ್ಧವಾಗಿ ನಡೆಸಬೇಕಾಗಿದ್ದ ಮೇಲ್ವಿಚಾರಣೆ ಕೊರೆತಿಂದ ತೆರಿಗೆಯೇತರ ರಾಜಸ್ವವು ಹೆಚ್ಚಳವಾಗದೇ ಇರುವುದಕ್ಕೆ ಪ್ರಮುಖ ಕಾರಣ. ಬಳಕೆ ಶುಲ್ಕ ಕಾಲಕಾಲಕ್ಕೆ ಪರಿಷ್ಕರಿಸುವ ಸ್ವಯಂಚಾಲಿತವಾಗಿರಬೇಕೆಂದು ಹಣಕಾಸು ಆಯೋಗ ಶಿಾರಸು ಮಾಡಿದೆ ಎಂಬ ಸಂಗತಿಯನ್ನು ನೆನಪಿಸಲಾಗಿದೆ.
    ಪ್ರಧಾನ ಮಹಾ ಲೇಖಪಾಲರು ರಾಜ್ಯ ಹಣಕಾಸಿನ ವ್ಯವಹಾರಗಳ ಮೇಲಿನ ವರದಿಯಲ್ಲಿ, ರಾಜಸ್ವ ಸಂಗ್ರಹ ಹೆಚ್ಚಿಸಲು ನಿಯಮಿತವಾಗಿ ಬಳಕೆದಾರರ ಶುಲ್ಕ ಪರಿಷ್ಕರಣೆ ಮಾಡಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಆಡಳಿತ ಸುಧಾರಣೆ ಆಯೋಗದ ವರದಿಯಲ್ಲೂ ಈ ಅಂಶ ಪ್ರಸ್ತಾಪಿಸಿದ್ದು, ಕಳೆದ ಮೂರು ವರ್ಷಗಳಿಂದ ಪರಿಷ್ಕರಣೆಯಾಗದೇ ಇದ್ದಲ್ಲಿ ಕೂಡಲೇ ತೆರಿಯೇತರ ರಾಜಸ್ವ ದರಗಳನ್ನು ಹಣದುಬ್ಬರದ ದರಕ್ಕೆ ಅನುಗುಣವಾಗಿ ಪರಿಷ್ಕರಿಸುವಂತೆ ಶಿಾರಸು ಮಾಡಿದೆ ಎಂಬ ಸಂಗತಿಯನ್ನು ಕೂಡ ಹಣಕಾಸು ಇಲಾಖೆ ಪ್ರಸ್ತಾಪಿಸಿದೆ.
    ಹೀಗಾಗಿ ಬಜೆಟ್ ತಯಾರಿಗಾಗಿ ತೆರಿಗೆಯೇತರ ರಾಜಸ್ವ ಅಂದಾಜುಗಳನ್ನು ಸಲ್ಲಿಸುವ ಮುನ್ನ ಎಲ್ಲಾ ತೆರಿಗೆಯೇತರ ರಾಜಸ್ವ ಮೂಲಗಳನ್ನು ಪರಿಶೀಲಿಸಿ, ದರಗಳು ಅಥವಾ ಬಳಕೆದಾರರ ಶುಲ್ಕಗಳನ್ನು ಪರಿಷ್ಕರಣೆ ಮಾಡುವ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.
    ವಾರ್ಷಿಕ ಯೋಜನೆಗಳಿಗೆ, ಹಿಂದಿನ ಯೋಜನಾ ಅವಧಿಯ ಬದ್ಧ ವೆಚ್ಚಗಳಿಗೆ, ಇತರೆ ಕಾರ್ಯಕ್ರಮಗಳಿಗೆ ಹಣ ಒದಗಿಸಲು ಸಂಪನ್ಮೂಲ ಸಂಗ್ರಹ ಅನಿವಾರ್ಯ. ಈ ಕಾರಣಕ್ಕೆ ಇಲಾಖೆ ಮುಖ್ಯಸ್ಥರು ಬಾಕಿ ವಸೂಲಾತಿಗೆ ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಳ್ಳಬೇಕೆಂದು ಆರ್ಥಿಕ ಇಲಾಖೆ ಸೂಚಿಸಿದೆ.
    ಈ ಹಿಂದೆ ಸಾಕಷ್ಟು ಸಾಲ ಮಂಜೂರು ಮಾಡಿದ್ದು, ಅವುಗಳು ವಸೂಲಾದೆ ಇನ್ನೂ ಬಾಕಿ ಉಳಿದಿವೆ. ಅಭಿವೃದ್ಧಿ ಮತ್ತು ಅಭಿವೃದ್ಧಿಯೇತರ ಚಟುವಟಿಕೆಗಳಿಗಾಗಿ ಸರ್ಕಾರಿ ಕಂಪನಿಗಳು, ಕಾರ್ಪೊರೇಷನ್‌ಗಳು, ಸ್ಥಳೀಯ ಸಂಸ್ಥೆಗಳು, ಸಹಕಾರಿ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಇತ್ಯಾದಿಗಳಿಗೆ ನೀಡಲಾಗಿರುವ ಸಾಲಗಳ ವಿಶ್ಲೇಷಣೆ ನಡೆಸಲಾಗಿದ್ದು, ಬಾಕಿ ಉಳಿದಿರುವ ಸಾಲದ ಪ್ರಮಾಣವು ಹೆಚ್ಚಾಗಿರುವುದು ಸಹ ಗಮನಕ್ಕೆ ಬಂದಿದೆ. ಇಂತಹ ಸಾಲಗಳ ಕುರಿತು ವಿವರಣೆ ಅಂದಾಜು ಸಲ್ಲಿಸುವುದು ಮತ್ತು ಸಾಲ ವಸೂಲಾತಿ ಬಗ್ಗೆ ತೆಗೆದುಕೊಂಡ ಕ್ರಮವನ್ನು ಆರ್ಥಿಕ ಇಲಾಖೆ ಪ್ರತ್ಯೇಕ ಇಲಾಖೆಗೆ ಸಲ್ಲಿಸಲು ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts